ದಾವಣಗೆರೆ: ಈಡಿಗ, ಬಿಲ್ಲವ, ನಾಮಧಾರಿ ಎಂದೆಲ್ಲ ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುವ ಈಡಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆರ್ಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದಾದ್ಯಂತ ಪಾದಯಾತ್ರೆ ಮಾಡುತ್ತಿರುವ ಸ್ವಾಮೀಜಿ ಮಂಗಳವಾರ ಇಲ್ಲಿನ ವಿನೋಬನಗರದ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 70 ಲಕ್ಷ ಜನರು ಇದ್ದಾರೆ. ನಮ್ಮ ಕುಲಕಸುಬನ್ನು ಬಂದ್ ಮಾಡಿ 18 ವರ್ಷಗಳು ದಾಟಿವೆ. ಕಾಡಿನ ಜತೆಗೆ ಬದುಕಿರುವ ಈ ಸಮುದಾಯದ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕು. ಬಳಿಕ ಎಸ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ನಿಗಮವನ್ನು ಘೋಷಣೆ ಮಾಡಿ ₹ 500 ಕೋಟಿ ಮೀಸಲಿಡಬೇಕು ಎಂದು ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಮೇಲೆ ಸರ್ಕಾರ ನಡೆಸುತ್ತಿರುವ ದೌರ್ಜನ್ಯಗಳನ್ನು ನಿಲ್ಲಬೇಕು ಎಂದರು.
‘ಕುಲಕಸುಬು ಸೇಂದಿ ಇಳಿಸುವ ಅವಕಾಶ ನೀಡಬೇಕು. ಬೆಂಗಳೂರು ವಿಧಾನಸೌಧದ ಎದುರು 60 ಅಡಿಯ ನಾರಾಯಣ ಗುರುಗಳ ಪುತ್ಥಳಿ ನಿರ್ಮಿಸಬೇಕು ಎಂಬುದೂ ಸೇರಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ. ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಫೆ. 1ರಿಂದ ಆಮರಣಾಂತ ಉಪವಾಸದೊಂದಿಗೆ ಪಾದಯಾತ್ರೆ ಮುಂದಿವರಿಸಬೇಕು ಎಂದು ನಿರ್ಣಯ ಕೈಗೊಂಡಿದ್ದೇನೆ. ಫೆ. 14ಕ್ಕೆ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಸಮಾವೇಶ ನಡೆಯಲಿದೆ’ ಎಂದು ತಿಳಿಸಿದರು.
ಆರ್ಯ ಈಡಿಗ ಸಮಾಜದ ಜಿಲ್ಲಾ ಕಾರ್ಯದರ್ಶಿ ಎ.ನಾಗರಾಜ ಮಾತನಾಡಿ, ‘ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಯು 26ನೇ ದಿನಕ್ಕೆ ಕಾಲಿಟ್ಟಿದೆ. ಸಮುದಾಯಕ್ಕೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ 515 ಕಿಲೋಮೀಟರ್ ದೂರದ ಪಾದಯಾತ್ರೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.
ಈಡಿಗ ಸಮಾಜದ ಜಿಲ್ಲಾ ಅಧ್ಯಕ್ಷ ಎಚ್. ಶಂಕರ್, ಖಜಾಂಚಿ ದೇವೇಂದ್ರಪ್ಪ, ಭರ್ಮಪ್ಪ, ನಿರ್ದೇಶಕರಾದ ಪರಶುರಾಮ, ಮಹಾಬಲೇಶ, ನಾರಾಯಣ ಗುರು ಶಕ್ತಿ ಪೀಠದ ಮುಖ್ಯಸ್ಥ ಆನಂದ, ಪ್ರತಾಪ್, ಬಾಲರಾಜ, ಜ್ಞಾನದೇವ, ಪ್ರಕಾಶ ಮತ್ತಿರರರಿದ್ದರು.