<p><strong>ದಾವಣಗೆರೆ:</strong> ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿಯ ಸೆಣೆಸಾಟದ ಮೂಲಕ ರಾಜ್ಯದ ಗಮನ ಸೆಳೆದಿರುವ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಕೊನೆಗೊಳ್ಳುತ್ತಿದ್ದಂತೆಯೇ ಸೋಲು–ಗೆಲುವಿನ ಲೆಕ್ಕಾಚಾರ ಶುರುವಾಗಿದೆ.</p>. <p>‘ಕೈ’ ಕೋಟೆಯಲ್ಲಿ ಕಮಲ ಅರಳುತ್ತಾ? ಕ್ಷೇತ್ರವನ್ನು ಉಳಿಸಿಕೊಂಡು ಗೆಲುವಿನ ನಾಗಾಲೋಟವನ್ನು ಕಾಂಗ್ರೆಸ್ ಮುಂದುವರಿಸಲಿದೆಯೇ? ಮುಸ್ಲಿಂ ಸಮುದಾಯದ ಮತಗಳು ಛಿದ್ರವಾಗಿದ್ದು ನಿಜವಾದರೆ ಯಾರಿಗೆ ಲಾಭ? ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳು ಮತಗಟ್ಟೆವಾರು ವಿವರಗಳನ್ನು ಕೈಯಲ್ಲಿಟ್ಟುಕೊಂಡು ಆಶಾಭಾವನೆ ವ್ಯಕ್ತಪಡಿಸುತ್ತಿವೆ.</p><p>ಕ್ಷೇತ್ರದಲ್ಲಿ ದಾಖಲಾದ ಮತದಾನದ ಪ್ರಮಾಣ, ಮತಗಟ್ಟೆ ಸಮೀಪ ಮತದಾರರು ವ್ಯಕ್ತಪಡಿಸಿದ ಅಭಿಪ್ರಾಯ, ಕಾರ್ಯಕರ್ತರು, ಬೆಂಬಲಿಗರು ನೀಡುತ್ತಿರುವ ವರದಿಗಳನ್ನು ಆಧರಿಸಿ ಅಭ್ಯರ್ಥಿಗಳು ಇಂಥ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪಕ್ಷೇತರರು ಪಡೆದ ಮತಗಳ ಪಾಲು, ಯಾವ ಜಾತಿ ಯಾರನ್ನು ಬೆಂಬಲಿಸಿರಬಹುದು ಎಂಬ ಮಾಹಿತಿಯನ್ನು ಕಲೆಹಾಕಲು ಪ್ರಯತ್ನಿಸಸುತ್ತಿದ್ದಾರೆ. ಮತದಾರರ ‘ತೀರ್ಪು’ ಮೇ 4ರಂದು ನಡೆಯಲಿರುವ ಮತ ಎಣಿಕೆಯಲ್ಲಿ ಬಹಿರಂಗವಾಗಲಿದೆ.</p><p>ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಟಿ.ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ 25 ಉಮೇದುವಾರರು ಕಣದಲ್ಲಿದ್ದರು. ಎರಡು ಪಕ್ಷಗಳ ನಡುವೆ ನೇರ ಪೈಪೋಟಿ ಇರುವಂತೆ ಕಂಡರೂ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಅವರ ‘ಮತಬೇಟೆ’ಯ ಕುರಿತೂ ಬಿರುಸಿನ ಚರ್ಚೆಗಳಾಗುತ್ತಿವೆ.</p><p>ಮತದಾನ ಪ್ರಕ್ರಿಯೆ ಪೂರ್ಣಗೊಂಡು ಮತಯಂತ್ರಗಳು ಭದ್ರತಾ ಕೊಠಡಿ ಸೇರುವ ಮುನ್ನವೇ ಕ್ಷೇತ್ರದಲ್ಲಿ ಚರ್ಚೆಗಳು ಬಿರುಸುಗೊಂಡವು. ಚುನಾವಣಾ ಫಲಿತಾಂಶದ ಕುರಿತ ಮಾತುಗಳು ಇಡೀ ಜಿಲ್ಲೆಯಾದ್ಯಂತ ಕೇಳಿಬರುತ್ತಿವೆ. ಹಳ್ಳಿ, ನಗರದ ಹೋಟೆಲ್, ಬಸ್ ನಿಲ್ದಾಣ ಸೇರಿದಂತೆ ನಾಲ್ಕಾರು ಜನ ಸೇರುವ ಸ್ಥಳಗಳಲ್ಲಿ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.</p><p>ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮುಸ್ಲಿಂ ಸಮುದಾಯದ ಮತಗಳು ಚದುರಿ ಹೋಗಿರುವ ಮಾತುಗಳು ಕೇಳಿಬರುತ್ತಿವೆ. ಕಣದಲ್ಲಿದ್ದ 25 ಅಭ್ಯರ್ಥಿಗಳಲ್ಲಿ ಮುಸ್ಲಿಂ ಸಮುದಾಯದ 14 ಹುರಿಯಾಳುಗಳಿದ್ದರು. ಒಬ್ಬರು ನಿವೃತ್ತಿ ಘೋಷಣೆ ಮಾಡಿದರೂ ಇತರರು ಸಮುದಾಯದ ರಾಜಕೀಯ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದರು. ‘ಹಸ್ತ’ದ ಗುರುತಿಗೆ ಇಡಿಯಾಗಿ ಹೋಗುತ್ತಿದ್ದ ಈ ಮತಗಳನ್ನು ಕಿತ್ತುಕೊಳ್ಳುವಲ್ಲಿ ಯಾರು ಯಶಸ್ವಿಯಾಗಿದ್ದಾರೆ? ಎಂಬ ಕುತೂಹಲ ಕೆರಳಿಸಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆಯೇ? ಎಂಬ ಕೌತಕವೂ ಮೂಡಿದೆ.</p><p>‘ಪಂಚ ಗ್ಯಾರಂಟಿ’ಗಳನ್ನು ನಂಬಿಕೊಂಡಿದ್ದ ಕಾಂಗ್ರೆಸ್ಗೆ ಇದೇ ಮೊದಲ ಬಾರಿಗೆ ಕ್ಷೇತ್ರದ ಉಪಚುನಾವಣೆ ಸವಾಲಾಗಿತ್ತು. ‘ತಾಳ ತಪ್ಪಿದ್ದು ಎಲ್ಲಿ?’ ಎಂಬುದನ್ನು ಹುಡುಕುತ್ತಿರುವ ‘ಕೈ’ ನಾಯಕರು, ‘ಅಂತಿಮ ಗೆಲುವು ತಮ್ಮದೇ’ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಈವರೆಗೆ ‘ಕಮಲ’ ಅರಳಿಸಲು ನಿರಂತರವಾಗಿ ಪ್ರಯತ್ನಿಸಿ ವಿಫಲವಾಗಿರುವ ಬಿಜೆಪಿಯಲ್ಲಿ ‘ಮತದಾನೋತ್ತರ ವಿಶ್ಲೇಷಣೆಗಳು ಆಶಾಭಾವ ಮೂಡಿಸಿವೆ’ ಎಂಬ ಮಾತುಗಳೂ ಕೇಳಿಬರುತ್ತಿವೆ.</p><p>ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದೊಳಗಿನ ‘ಆಂತರಿಕ ದೂರು– ದುಮ್ಮಾನ’ದಂಥ ಬೆಳವಣಿಗೆಗಳೂ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿಯ ಸೆಣೆಸಾಟದ ಮೂಲಕ ರಾಜ್ಯದ ಗಮನ ಸೆಳೆದಿರುವ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಕೊನೆಗೊಳ್ಳುತ್ತಿದ್ದಂತೆಯೇ ಸೋಲು–ಗೆಲುವಿನ ಲೆಕ್ಕಾಚಾರ ಶುರುವಾಗಿದೆ.</p>. <p>‘ಕೈ’ ಕೋಟೆಯಲ್ಲಿ ಕಮಲ ಅರಳುತ್ತಾ? ಕ್ಷೇತ್ರವನ್ನು ಉಳಿಸಿಕೊಂಡು ಗೆಲುವಿನ ನಾಗಾಲೋಟವನ್ನು ಕಾಂಗ್ರೆಸ್ ಮುಂದುವರಿಸಲಿದೆಯೇ? ಮುಸ್ಲಿಂ ಸಮುದಾಯದ ಮತಗಳು ಛಿದ್ರವಾಗಿದ್ದು ನಿಜವಾದರೆ ಯಾರಿಗೆ ಲಾಭ? ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳು ಮತಗಟ್ಟೆವಾರು ವಿವರಗಳನ್ನು ಕೈಯಲ್ಲಿಟ್ಟುಕೊಂಡು ಆಶಾಭಾವನೆ ವ್ಯಕ್ತಪಡಿಸುತ್ತಿವೆ.</p><p>ಕ್ಷೇತ್ರದಲ್ಲಿ ದಾಖಲಾದ ಮತದಾನದ ಪ್ರಮಾಣ, ಮತಗಟ್ಟೆ ಸಮೀಪ ಮತದಾರರು ವ್ಯಕ್ತಪಡಿಸಿದ ಅಭಿಪ್ರಾಯ, ಕಾರ್ಯಕರ್ತರು, ಬೆಂಬಲಿಗರು ನೀಡುತ್ತಿರುವ ವರದಿಗಳನ್ನು ಆಧರಿಸಿ ಅಭ್ಯರ್ಥಿಗಳು ಇಂಥ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪಕ್ಷೇತರರು ಪಡೆದ ಮತಗಳ ಪಾಲು, ಯಾವ ಜಾತಿ ಯಾರನ್ನು ಬೆಂಬಲಿಸಿರಬಹುದು ಎಂಬ ಮಾಹಿತಿಯನ್ನು ಕಲೆಹಾಕಲು ಪ್ರಯತ್ನಿಸಸುತ್ತಿದ್ದಾರೆ. ಮತದಾರರ ‘ತೀರ್ಪು’ ಮೇ 4ರಂದು ನಡೆಯಲಿರುವ ಮತ ಎಣಿಕೆಯಲ್ಲಿ ಬಹಿರಂಗವಾಗಲಿದೆ.</p><p>ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಟಿ.ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ 25 ಉಮೇದುವಾರರು ಕಣದಲ್ಲಿದ್ದರು. ಎರಡು ಪಕ್ಷಗಳ ನಡುವೆ ನೇರ ಪೈಪೋಟಿ ಇರುವಂತೆ ಕಂಡರೂ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಅವರ ‘ಮತಬೇಟೆ’ಯ ಕುರಿತೂ ಬಿರುಸಿನ ಚರ್ಚೆಗಳಾಗುತ್ತಿವೆ.</p><p>ಮತದಾನ ಪ್ರಕ್ರಿಯೆ ಪೂರ್ಣಗೊಂಡು ಮತಯಂತ್ರಗಳು ಭದ್ರತಾ ಕೊಠಡಿ ಸೇರುವ ಮುನ್ನವೇ ಕ್ಷೇತ್ರದಲ್ಲಿ ಚರ್ಚೆಗಳು ಬಿರುಸುಗೊಂಡವು. ಚುನಾವಣಾ ಫಲಿತಾಂಶದ ಕುರಿತ ಮಾತುಗಳು ಇಡೀ ಜಿಲ್ಲೆಯಾದ್ಯಂತ ಕೇಳಿಬರುತ್ತಿವೆ. ಹಳ್ಳಿ, ನಗರದ ಹೋಟೆಲ್, ಬಸ್ ನಿಲ್ದಾಣ ಸೇರಿದಂತೆ ನಾಲ್ಕಾರು ಜನ ಸೇರುವ ಸ್ಥಳಗಳಲ್ಲಿ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.</p><p>ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮುಸ್ಲಿಂ ಸಮುದಾಯದ ಮತಗಳು ಚದುರಿ ಹೋಗಿರುವ ಮಾತುಗಳು ಕೇಳಿಬರುತ್ತಿವೆ. ಕಣದಲ್ಲಿದ್ದ 25 ಅಭ್ಯರ್ಥಿಗಳಲ್ಲಿ ಮುಸ್ಲಿಂ ಸಮುದಾಯದ 14 ಹುರಿಯಾಳುಗಳಿದ್ದರು. ಒಬ್ಬರು ನಿವೃತ್ತಿ ಘೋಷಣೆ ಮಾಡಿದರೂ ಇತರರು ಸಮುದಾಯದ ರಾಜಕೀಯ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದರು. ‘ಹಸ್ತ’ದ ಗುರುತಿಗೆ ಇಡಿಯಾಗಿ ಹೋಗುತ್ತಿದ್ದ ಈ ಮತಗಳನ್ನು ಕಿತ್ತುಕೊಳ್ಳುವಲ್ಲಿ ಯಾರು ಯಶಸ್ವಿಯಾಗಿದ್ದಾರೆ? ಎಂಬ ಕುತೂಹಲ ಕೆರಳಿಸಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆಯೇ? ಎಂಬ ಕೌತಕವೂ ಮೂಡಿದೆ.</p><p>‘ಪಂಚ ಗ್ಯಾರಂಟಿ’ಗಳನ್ನು ನಂಬಿಕೊಂಡಿದ್ದ ಕಾಂಗ್ರೆಸ್ಗೆ ಇದೇ ಮೊದಲ ಬಾರಿಗೆ ಕ್ಷೇತ್ರದ ಉಪಚುನಾವಣೆ ಸವಾಲಾಗಿತ್ತು. ‘ತಾಳ ತಪ್ಪಿದ್ದು ಎಲ್ಲಿ?’ ಎಂಬುದನ್ನು ಹುಡುಕುತ್ತಿರುವ ‘ಕೈ’ ನಾಯಕರು, ‘ಅಂತಿಮ ಗೆಲುವು ತಮ್ಮದೇ’ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಈವರೆಗೆ ‘ಕಮಲ’ ಅರಳಿಸಲು ನಿರಂತರವಾಗಿ ಪ್ರಯತ್ನಿಸಿ ವಿಫಲವಾಗಿರುವ ಬಿಜೆಪಿಯಲ್ಲಿ ‘ಮತದಾನೋತ್ತರ ವಿಶ್ಲೇಷಣೆಗಳು ಆಶಾಭಾವ ಮೂಡಿಸಿವೆ’ ಎಂಬ ಮಾತುಗಳೂ ಕೇಳಿಬರುತ್ತಿವೆ.</p><p>ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದೊಳಗಿನ ‘ಆಂತರಿಕ ದೂರು– ದುಮ್ಮಾನ’ದಂಥ ಬೆಳವಣಿಗೆಗಳೂ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>