ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೃಷಿ, ಕೃಷಿ ಸಂಬಂಧಿತರಿಗೆ ಲಾಕ್‌ಡೌನ್‌ ಇಲ್ಲ

ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 12 ಏಪ್ರಿಲ್ 2020, 15:02 IST
ಅಕ್ಷರ ಗಾತ್ರ

ದಾವಣಗೆರೆ: ಕೃಷಿಕರು ಮತ್ತು ಕೃಷಿ ಸಂಬಂಧಿತರನ್ನು ಲಾಕ್‌ಡೌನ್ ಕ್ರಮದಿಂದ ಸಡಿಲಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೃಷಿ ಪರಿಕರ ಮಾರಾಟಗಾರರೊಂದಿಗೆ ಭಾನುವಾರ ಸಭೆ ನಡೆಸಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿ ಒಂದು ಎಕರೆ ಜಾಗದಲ್ಲಿ ಏನಾದರೂ ಬಿತ್ತಿ ಬೆಳೆದು ಮಾರುಕಟ್ಟೆಯಲ್ಲಿ ಮಾರಿ ಅದರಿಂದ ಬಂದಂತಹ ಹಣದಿಂದ ಅವನು ಜೀವನ ಮಾಡಬೇಕೆಂದರೆ ಎಷ್ಟು ದೊಡ್ಡ ಸರಪಳಿ ಇದೆ ಎಂಬುದನ್ನು ಅರಿಯಬೇಕು. ಆ ಸರಪಳಿಯಲ್ಲಿ ಭಾಗವಹಿಸುವಂತಹ ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆ ಹಾಗೂ ಅವರಿಗೆ ಬೇಕಾದಂತಹ ಅವಶ್ಯಕವಿರುವ ಎಲ್ಲ ವಸ್ತುಗಳಿಗೆ ಈ ಕ್ಷಣದಿಂದ ನಿರ್ಬಂಧ ಇರುವುದಿಲ್ಲ ಎಂದು ವಿವರಿಸಿದರು.

ರೈತರ ಕೃಷಿ ಸಂಬಂಧಿತ ಎಲ್ಲಾ ಸೇವೆಗಳು ನಿರಾಂತಕವಾಗಿ ನಡೆಯಲಿವೆ. ರೈತರಿಗಾಗಲೀ, ಕೃಷಿ ಪರಿಕರ ಮಾರಾಟಗಾರರಿಗಾಗಲೀ ಯಾವುದೇ ಆತಂಕ ಬೇಡ ಎಂದು ಹೇಳಿದರು.

ಸದ್ಯದಲ್ಲೇ ಕಾರಿಫ್ ಸೀಸನ್ ಆರಂಭವಾಗಲಿದ್ದು, ರೈತರಿಗೆ ಬೇಕಾದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕಗಳು, ಯಂತ್ರೋಪಕರಣಗಳು ಸೇರಿ ಎಲ್ಲಾ ದಾಸ್ತಾನನ್ನು ಮೇ 15ರ ಒಳಗಾಗಿ ದಾಸ್ತಾನು ಮಾಡಿಕೊಳ್ಳಲು ತಿಳಿಸಿದರು.

ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯ ನಿರ್ವಹಿಸಬೇಕು. ಸ್ಥಳದಲ್ಲಿ ಆದಷ್ಟು ಕಡಿಮೆ ಸಿಬ್ಬಂದಿ ಇರಬೇಕು. ಸುರಕ್ಷತೆಗೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ಯಾನಿಟೈಸರ್, ಮಾಸ್ಕ್ ಮುಂತಾದ ಸುರಕ್ಷಾ ಪರಿಕರಗಳನ್ನು ಸಿಬ್ಬಂದಿಗೆ ನೀಡಬೇಕು. ಇದಕ್ಕಾಗಿ ಕೃಷಿ ಇಲಾಖೆಯಿಂದ ಅಗತ್ಯವಿರುವ ಪಾಸ್‌ಗಳನ್ನು ನೀಡಲಾಗುವುದು. ಹಮಾಲಿಗಳಿಗೆ ತಮ್ಮ ಅಂಗಡಿ ವತಿಯಿಂದಲೇ ಐಡಿ ಕಾರ್ಡ್‌ನ್ನು ಅಥವಾ ಅನುಮತಿ ಪತ್ರವನ್ನು ನೀಡಬೇಕು ಎಂದು ಸೂಚಿಸಿದರು.

ಕೃಷಿ ಪರಿಕರ ವರ್ತಕರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ‘ನಮ್ಮಲ್ಲಿ 500 ಸರಬರಾಜುದಾರರಿದ್ದು, ಅವರ ಬಳಿ ಸಹಾಯಕರಾಗಿ ಒಂದಿಬ್ಬರು ಕೆಲಸ ಮಾಡಬೇಕಾಗುತ್ತದೆ. ಅವರಿಗೆ ಪಾಸ್ ವ್ಯವಸ್ಥೆ ಮಾಡಬೇಕು. ಹಾಗೂ ಟ್ರ್ಯಾಕ್ಟರ್ ರಿಪೇರಿಗೆ ಗ್ಯಾರೇಜ್‌ಗಳ ಅವಶ್ಯಕತೆ ಇದೆ. ಅವುಗಳನ್ನು ನಿರ್ದಿಷ್ಟ ಅವಧಿಯಲ್ಲಿ ಅಥವಾ ದಿನ ಪೂರ್ತಿ ತೆರೆಯುವಂತೆ ನೋಡಿಕೊಳ್ಳಬೇಕು. ಅಮರಾವತಿ ಬಳಿ ಇರುವ ರೈಲ್ವೆ ಗೂಡ್ಸ್‌ನಲ್ಲಿ ಕನಿಷ್ಠ 600 ಜನ ಹಮಾಲಿಗಳು ಕಾರ್ಯ ನಿರ್ವಹಿಸುತ್ತಿದ್ದು, 9 ಗಂಟೆಯೊಳಗಾಗಿ ಸರಕನ್ನು ಖಾಲಿ ಮಾಡಬೇಕಾಗಿರುತ್ತದೆ. ಅದರಿಂದ ಎಲ್ಲಾ ಹಮಾಲಿಗಳಿಗೂ ಗುರುತಿನ ಚೀಟಿ ವಿತರಿಸಬೇಕು. ಬಿತ್ತನೆ ಬೀಜ ಹೊರರಾಜ್ಯದಿಂದ ಬರಬೇಕಾಗಿದ್ದು, ಇದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಹಮಾಲರಿಗೆ 1 ಸಾವಿರ ಆಹಾರದ ಕಿಟ್: ಜಿಲ್ಲಾಧಿಕಾರಿಗಳ ಕೋರಿಕೆ ಮೇರೆಗೆ ಹಮಾಲಿ ಕೆಲಸ ಮಾಡುವವರಿಗೆ ಅಕ್ಕಿ ನೀಡಲಾಗಿದೆ. ಉಳಿದ ಆಹಾರ ಪದಾರ್ಥಗಳ ಒಂದು ಸಾವಿರ ಕಿಟ್‌ಗಳನ್ನು ಸಂಘದ ವತಿಯಿಂದ ನೀಡಲಾಗುವುದು ಎಂದು ಕೃಷಿ ಪರಿಕರ ವರ್ತಕರ ಸಂಘದ ಅಧ್ಯಕ್ಷ ನಾಗರಾಜು ತಿಳಿಸಿದರು.

ಕೃಷಿ ಪರಿಕರ ಮಾರಾಟಗಾರರು, ರಾಸಾಯನಿಕ ಗೊಬ್ಬರಗಳ ಮಾರಾಟಗಾರರು, ಬಿತ್ತನೆ ಬೀಜ, ಕೊಯ್ಲು ಯಂತ್ರಗಳು, ರೇಕ್ ಮೂವ್‌ಮೆಂಟ್, ಬಾಡಿಗೆ ಯಂತ್ರೋಪಕರಣ, ಕೃಷಿ ಪ್ಯಾಕೇಜಿಂಗ್ ಇಂಡಸ್ಟ್ರಿ, ಕೃಷಿ ಉಪಕರಣಗಳ ದುರಸ್ತಿ ಹಾಗೂ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಎಸಿ ಮಮತಾ ಹೊಸಗೌಡರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಇದ್ದರು.

ಚೆಕ್‌ಪೋಸ್ಟ್‌ನಲ್ಲಿ ತಡೆಯದಂತೆ ಸೂಚನೆ: ಎಸ್‌ಪಿ

ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಗುರುತಿನ ಚೀಟಿ ನೀಡಿ. ಚೆಕ್‌ಪೋಸ್ಟ್‌ಗಳಲ್ಲಿ ತಡೆಯದಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು. ಆದರೆ ಈ ಗುರುತಿನ ಚೀಟಿಗಳು ದುರುಪಯೋಗವಾಗಬಾರದು. ಕೃಷಿಗೆ ಪೂರಕವಾದ ಟ್ರ್ಯಾಕ್ಟರ್ ರಿಪೇರಿ, ಬಿಡಿ ಭಾಗಗಳ ಮಾರಾಟಕ್ಕೆ ಅನುಮತಿ ಇದೆ. ಕೆಲವೊಂದು ಕೊಯ್ಲು ಯಂತ್ರಗಳನ್ನು ಆಂಧ್ರಪ್ರದೇಶದಿಂದ ತರಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಅಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT