ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಯಲ್ಲಿ ಸಿಲುಕಿದ್ದ ದಾವಣಗೆರೆ ಮಹಿಳೆ ಸ್ವದೇಶಕ್ಕೆ ವಾಪಸ್‌

‘ಪ್ರಜಾವಾಣಿ’ ವರದಿ ನೋಡಿ ಸೌದಿಯಲ್ಲಿದ್ದ ಕನ್ನಡಿಗರ ಹೋರಾಟಕ್ಕೆ ದೊರಕಿದ ಸ್ಪಂದನ
Last Updated 20 ಜೂನ್ 2021, 6:06 IST
ಅಕ್ಷರ ಗಾತ್ರ

ದಾವಣಗೆರೆ: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಮಹಿಳೆಯನ್ನು ಊರಿಗೆ ಮರಳಲೂ ಬಿಡದೆ ಕೂಡಿಹಾಕಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಸೌದಿಯಲ್ಲಿರುವ ಕನ್ನಡಿಗರು ‘ಪ್ರಜಾವಾಣಿ’ ವರದಿಯನ್ನು ಆಧರಿಸಿ ಮಾಡಿದ ಹೋರಾಟ, ಭಾರತ ಸರ್ಕಾರ ಮತ್ತು ಸೌದಿ ಅರೇಬಿಯಾ ಸರ್ಕಾರ ಸ್ಪಂದಿಸಿದ್ದರಿಂದ ಮಹಿಳೆ ಭಾರತಕ್ಕೆ ಶನಿವಾರ ಮರಳಿದ್ದಾರೆ.

ದಾವಣಗೆರೆಯ ಆಜಾದ್‌ನಗರದ ಎರಡನೇ ಮುಖ್ಯರಸ್ತೆ, ಐದನೇ ಅಡ್ಡರಸ್ತೆಯ ನಿವಾಸಿ ಮಕ್ಬುಲ್‌ಸಾಬ್‌ ಅವರ ಮಗಳು ಫೈರೋಜಾ ಬಾನು ಭಾರತಕ್ಕೆ ವಾಪಸ್ಸಾದವರು. ಅವರು ಶನಿವಾರ ಮುಂಜಾನೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಮಕ್ಬುಲ್‌ ಸಾಬ್‌ ಜುಬೇದಾಬಿ ದಂಪತಿಗೆ ಏಳು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು. ಮೊದಲ ಮಗಳಾದ ಫೈರೋಜಾ ಬಾನುಗೆ 14 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೂರು ಮಕ್ಕಳಾದ ಮೇಲೆ ಗಂಡನೂ ಬಿಟ್ಟುಹೋಗಿದ್ದ. ಹೊಟ್ಟೆಪಾಡಿಗಾಗಿ ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಫೈರೋಜಾ ಬಾನು ಹೋಗಿದ್ದರು. ಬಳಿಕ ತಾಯಿ ಮೃತಪಟ್ಟಾಗ ನೋಡಲು ಕೂಡ ಕಳುಹಿಸಿಕೊಟ್ಟಿರಲಿಲ್ಲ. ವೇತನವನ್ನೂ ನೀಡಿರಲಿಲ್ಲ. ಅವರನ್ನು ಹೇಗಾದರೂ ಭಾರತಕ್ಕೆ ಕರೆಸಿ ಎಂದು ಆಕೆಯ ಸಹೋದರಿ ನಸ್ರೀನ್‌ಬಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.

‘ಸೌದಿಯಲ್ಲಿ ಸಿಲುಕಿರುವ ದಾವಣಗೆರೆಯ ಮಹಿಳೆ’ ಎಂದು ‘ಪ್ರಜಾವಾಣಿ’ ಈ ಬಗ್ಗೆ ಕಳೆದ ಮಾರ್ಚ್‌ 20ರಂದು ವಿಶೇಷ ವರದಿ ಪ್ರಕಟಿಸಿತ್ತು. prajavani.netನಲ್ಲಿ ಕೂಡ ಪ್ರಕಟವಾಗಿದ್ದ ಈ ವರದಿಯನ್ನು ಆನ್‌ಲೈನ್‌ನಲ್ಲಿ ನೋಡಿ ರಿಯಾದ್‌ನಲ್ಲಿ ಇರುವ ಪಡುಬಿದ್ರಿಯ ಹಮೀದ್‌ ಸ್ಪಂದಿಸಿದ್ದರು. ಅವರಿಗೆ ದಮಾಮ್‌ನಲ್ಲಿ ಇರುವ ಕಲಬುರ್ಗಿಯ ಯಾಸಿನ್‌ ಕೈ ಜೋಡಿಸಿದ್ದರು. ಈ ಇಬ್ಬರ ಪ್ರಯತ್ನದಿಂದ
ಸೌದಿ ರಾಜಧಾನಿ ರಿಯಾದ್‌ನಿಂದ ಸುಮಾರು ಸಾವಿರ ಕಿಲೋಮೀಟರ್ ದೂರ ಇರುವ ಸಕಾಕಹ್‌ನಲ್ಲಿ ಫೈರೋಜಾ ಬಾನು ಇರುವುದು ಪತ್ತೆಯಾಗಿತ್ತು. ಸಕಾಕಹ್‌ನಲ್ಲಿ ಇರುವ ಕೇರಳದ ಸಲಿಂ ಎಂಬವರ ನೆರವು ಪಡೆದುಕೊಂಡು ಅಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಭಾರತದ ವಿದೇಶಾಂಗ ಸಚಿವಾಲಯದ ಗಮನಕ್ಕೂ ತಂದಿದ್ದರು. ಜತೆಗೆ ಅಲ್ಲಿ ಹ್ಯೂಮನ್‌ ರೈಟ್ಸ್‌ ಕಮಿಷನ್‌ನ ಗಮನಕ್ಕೆ ತರಲಾಗಿತ್ತು.

ಈ ಎಲ್ಲರ ಪ್ರಯತ್ನದ ಫಲವಾಗಿ ಫೈರೋಜ್‌ ಬಾನು ಅವರ ಕಫೀಲ್‌ (ಪ್ರಾಯೋಜಕ) ಭಾರತಕ್ಕೆ ಕಳುಹಿಸಿಕೊಡಲು ಒಪ್ಪಿದ್ದಾನೆ. ಅದರಂತೆ ಶುಕ್ರವಾರ ಸಕಾಕಹ್‌ನಿಂದ ಕತಾರ್‌ಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ.

ಕಫೀಲ್‌ ಬಹಳ ತೊಂದರೆ ಕೊಟ್ಟ. ಹ್ಯೂಮನ್‌ ರೈಟ್ಸ್‌ ಕಮಿಷನ್‌, ಎರಡು ಸರ್ಕಾರಗಳು ಮತ್ತು ಸ್ನೇಹಿತರ ಸಹಕಾರದಿಂದ ಫೈರೋಜಾ ಬಾನು ಭಾರತಕ್ಕೆ ಹೋಗುವಂತಾಯಿತು ಎಂದು ರಿಯಾದ್‌ನಲ್ಲಿರುವ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪಿ.ಎ. ಹಮೀದ್‌ ಪಡುಬಿದ್ರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೌದಿ ಅರೇಬಿಯಾಕ್ಕೆ ಹೋಗಿದ್ದ ಅಕ್ಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರನ್ನು ಕರೆದುಕೊಂಡು ಬರಲು ಮನೆಯವರು ಹೋಗಿದ್ದಾರೆ ಎಂದು ಫೈರೊಜಾಬಾನಿ ಅವರ ಸಹೋದರಿ ನಸ್ರೀನ್‌ ಬಾನು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT