ಯಲಬುರ್ಗಾ: ‘ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ, ಶೈಕ್ಷಣಿಕ ಸುಧಾರಣೆಗೆ ಮೊದಲ ಆದ್ಯತೆ ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ನೂತನ ಶಾಸಕ ಹಾಲಪ್ಪ ಆಚಾರ ಭರವಸೆ ನೀಡಿದರು.
ಶಾಸಕರಾಗಿ ಆಯ್ಕೆಯಾದ ನಂತರ, ಮಂಗಳವಾರ ಕ್ಷೇತ್ರದಲ್ಲಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಿರೀಕ್ಷೆಗೂ ಮೀರಿ ಬೆಂಬಲಿಸಿದ ಕ್ಷೇತ್ರದ ಜನರ ವಿಶ್ವಾಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಅಧಿಕಾರ ನಡೆಸಲು ಪ್ರಯತ್ನಿಸುತ್ತೇನೆ. ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಶೇಷ ಗಮನಹರಿಸಿ ಕೆಲಸ ಮಾಡುತ್ತೇನೆ’ ಎಂದರು.
ಮೆರವಣಿಗೆ: ಸ್ಥಳೀಯ ರಾಘವೇದ್ರಸ್ವಾಮಿ ಮಠದಿಂದ ತೆರೆದ ವಾಹನದಲ್ಲಿ ಶಾಸಕ ಹಾಲಪ್ಪ ಆಚಾರ ಅವರ ಅದ್ಧೂರಿ ಮೆರವಣಿಗೆ ಜರುಗಿತು. ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪುತ್ಥಳಿಗೆ ಮಾಲೆ ಹಾಕಿ ಗೌರವಿಸಿದರು. ನಂತರ ಶ್ರೀಧರ ಮುರಡಿ ಹಿರೇಮಠಕ್ಕೆ ತೆರಳಿ ಬಸವಲಿಂಗೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್.ಪೋಲೀಸ್ ಪಾಟೀಲ್, ನವೀನ ಗುಳಗಣ್ಣನವರ್, ಪ್ರಭುರಾಜ ಕಲಬುರ್ಗಿ, ವೀರಣ್ಣ ಹುಬ್ಬಳ್ಳಿ, ಸಿದ್ಧರಾಮೇಶ ಬೇಲೇರಿ ಇದ್ದರು.