ಹುಬ್ಬಳ್ಳಿ: ಗದಗ ರಸ್ತೆಯಲ್ಲಿರುವ ಚಾಲುಕ್ಯ ಇನ್ಸಿಟ್ಯೂಟ್ನಲ್ಲಿ ಮಂಗಳವಾರ ನೈರುತ್ಯ ರೈಲ್ವೆ ವಲಯದ ವತಿಯಿಂದ ವಿಶ್ವ ಅಂಗವಿಕಲರ ದಿನ ಆಚರಿಸಲಾಯಿತು.
ಈ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣವನ್ನು ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್ ಉದ್ಘಾಟಿಸಿ, ತಮ್ಮ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗವಿಕಲ ಉದ್ಯೋಗಿಗಳ ಜೊತೆ ಬೆರೆತರು.
ಬಳಿಕ ಮಾತನಾಡಿದ ಅವರು ‘ಅಂಗವಿಕಲರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಯಾವಾಗಲೂ ಗೌರವದಿಂದ ಕಾಣಬೇಕು’ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೆ.ಎಂ. ಅಮರನಾಥ ಮಾತನಾಡಿ ‘ಅಂಗವಿಕಲರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳ ಬಗ್ಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ’ ಎಂದರು.
ನೈರುತ್ಯ ರೈಲ್ವೆಯ 75ಕ್ಕೂ ಹೆಚ್ಚು ಅಂಗವಿಕಲ ಉದ್ಯೋಗಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. 2018ರಲ್ಲಿ ನೇಪಾಳದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಅಂಗವಿಕಲರ ಅಥ್ಲೆಟಿಕ್ಸ್ನ ಶಾಟ್ಪಟ್ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದ ಯಮನಪ್ಪ ಅರಬಾಲಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಅಜಯ ಕುಮಾರ ಸಿಂಗ್, ರೈಲ್ವೆ ಉದ್ಯೋಗಿ ಗೋಪಾಲ ನಾಯಕ ಮತ್ತು ಅಂಗವಿಕಲರು ಹಾಡಿದ ಹಾಡು ಪ್ರೇಕ್ಷಕರನ್ನು ರಂಚಿಸಿತು. ಇಲಾಖೆಯ ಹಿರಿಯ ಅಧಿಕಾರಿ ಬಿ.ಜಿ. ಮಲ್ಯಾ ಸೇರಿದಂತೆ ಅನೇಕ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.