ಬಸವಾಪಟ್ಟಣ: ಇಲ್ಲಿನ ವಿವಿಧ ಬಡಾವಣೆಗಳಿಗೆ ಹತ್ತು ದಿನಗಳಾದರೂ ನೀರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂದು ಇಲ್ಲಿನ ಕೆ.ಇ.ಬಿ.ರಸ್ತೆಯ ನಿವಾಸಿಗಳು ಶನಿವಾರ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
‘ಕೊರೊನಾ ಸೋಂಕು ಹರಡುತ್ತಿರುವ ಪರಿಸ್ಥಿತಿಯಲ್ಲಿ ನೀರಿಲ್ಲದೆ ಪರದಾಡುವಂತಾಗಿದೆ.ಗ್ರಾಮ ಪಂಚಾಯಿತಿ ನೀರನ್ನು ಪೂರೈಸುತ್ತಿಲ್ಲ. ಹತ್ತು ದಿನಗಳಿಗೆ ಒಮ್ಮೆಯಾದರೂ ನೀರು ಪೂರೈಸುತ್ತಿಲ್ಲ’ ಎಂದು ಇಲ್ಲಿನ ನಿವಾಸಿ ಷಬಾನಾ ಬಾನು ಆರೋಪಿಸಿದರು.
ಗ್ರಾಮದಲ್ಲಿಒಂಬತ್ತು ಸಾವಿರ ಜನಸಂಖ್ಯೆ ಇದೆ. ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿದು ಆಡಳಿತಾಧಿಕಾರಿಯನ್ನು ಸರ್ಕಾರ ನೇಮಕ ಮಾಡಿದೆ. ಇಲ್ಲಿನ ಗ್ರಾಮ ಪಂಚಾಯಿತಿಗೆ ನೇಮಿಸಿರುವ ಆಡಳಿತಾಧಿಕಾರಿ ಎರಡು ತಿಂಗಳಾದರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಅಭಿವೃದ್ಧಿ ಅಧಿಕಾರಿಗೆ ಕೋವಿಡ್ ಬಂದಿದ್ದು, ಅವರು ರಜೆಯಲ್ಲಿದ್ದಾರೆ. ನೀರಿಗಾಗಿ ಗ್ರಾಮದ ಎಲ್ಲಾ ಜನರೂ ಪ್ರತಿಭಟನೆಗೆ ನಿಲ್ಲುವ ಮೊದಲು ಅಧಿಕಾರಿಗಳು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೈಯದ್ ರಫೀಕ್ ಒತ್ತಾಯಿಸಿದರು.
‘ಅಗತ್ಯ ವಸ್ತುವಾದ ನೀರೇ ಇಲ್ಲದಿದ್ದಲ್ಲಿ ಜೀವನ ನಡೆಸುವುದು ಹೇಗೆ. ಕೊಳವೆಬಾವಿಗಳಿಂದ ಸಾಕಷ್ಟು ನೀರು ಪೂರೈಕೆಯಾಗುತ್ತಿದ್ದರೂ ಗ್ರಾಮದ ಎಲ್ಲಾ ಕೇರಿಗಳಿಗೆ ನೀರು ಸರಬರಾಜಾಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಇಲ್ಲಿನ ನಿವಾಸಿಗಳಾದ ಬೀಬಿ ಆಯಿಷಾ ,ಹರ್ಷಿದಾಬಾನು ಮನವಿ ಮಾಡಿದರು.
‘ಪ್ರತಿದಿನ ನೀರುಗಂಟಿಗಳಿಗೆ ನೀರು ಬಿಡುವಂತೆ ಮನವಿ ಮಾಡಿ ಸಾಕಾಗಿದೆ. ಇಲ್ಲಿನ ಬಾವಿಗಳೂ ಹಾಳಾಗಿವೆ. ನೀರಿಗಾಗಿ ಗ್ರಾಮ ಪಂಚಾಯಿತಿಯನ್ನೇ ಅವಲಂಬಿಸಬೇಕಿದೆ’ ಎಂದು ನಿವಾಸಿ ಗಳಾದ ಪಿ.ಮುಜೀಬುಲ್ಲಾ, ಎ.ಬಿ.ಜಫ್ರುಲ್ಲಾ, ರಹಮತ್ ಉಲ್ಲಾ, ಸೈಯದ್ ಸಮೀಉಲ್ಲಾ, ಆಶ್ರಫ್ ಖಾನ್ ಹೇಳಿದರು.