ಘೋಷ್ ಸಂಪುಟ ರಚನೆ ಶಾಸನ ಬದ್ಧ: ಕಲ್ಕತ್ತ ಹೈಕೋರ್ಟ್ ತೀರ್ಪು
ಕಲ್ಕತ್ತ, ಫೆ. 6– ಪಶ್ಚಿಮ ಬಂಗಾಳದ ಘೋಷ್ ಸಂಪುಟ ರಚನೆ ಶಾಸನಬದ್ಧವೆಂದು ಕಲ್ಕತ್ತ ಹೈಕೋರ್ಟಿನಲ್ಲಿ ನ್ಯಾಯಮೂರ್ತಿ ಶ್ರೀ ಬಿ.ಸಿ. ಮಿತ್ರಾ ಅವರು ಇಂದು ತೀರ್ಪಿತ್ತರು.
ಕಳೆದ ನವೆಂಬರಿನಲ್ಲಿ ಸಂಯುಕ್ತ ರಂಗ ಸಂಪುಟವನ್ನು ವಜಾ ಮಾಡಿ ಡಾ. ಪಿ.ಸಿ. ಘೋಷ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ಆಜ್ಞೆಯ ಶಾಸನ ಬದ್ಧತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂರು ರಿಟ್ ಅರ್ಜಿಗಳನ್ನೂ ನ್ಯಾಯಾಧೀಶರು ತಿರಸ್ಕರಿಸಿದರು.
ಮಂಗಳೂರು, ಫೆ. 6– ಪಶ್ಚಿಮ ಕರಾವಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಗೊಳ್ಳಿ ನದಿಗೆ ನಿರ್ಮಿಸಲಾಗಿರುವ ಐದು ಸೇತುವೆಗಳನ್ನು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಉದ್ಘಾಟಿಸಿದರು.
ಇಲ್ಲಿಗೆ 60 ಮೈಲಿ ದೂರದಲ್ಲಿರುವ ಕುಂದಾಪುರದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರದ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ವಹಿಸಿದ್ದರು.
ರಾಜಕೀಯ ಪಕ್ಷಗಳಿಗೆ ಕಂಪೆನಿಗಳಿಂದ ಕಾಣಿಕೆ: ನಿಷೇಧಕ್ಕೆ ಕಾನೂನು ಕ್ರಮ
ನವದೆಹಲಿ, ಫೆ. 6– ರಾಜಕೀಯ ಪಕ್ಷಗಳಿಗೆ ಕಂಪೆನಿಗಳು ಕಾಣಿಕೆ ಕೊಡುವುದನ್ನು ನಿಷೇಧಿಸುವ ಸರಕಾರದ ನಿರ್ಧಾರವನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬ ಬಗ್ಗೆ ಕೇಂದ್ರ ಕಾನೂನು ಖಾತೆ ಮತ್ತು ಕಂಪೆನಿ ವ್ಯವಹಾರ ಇಲಾಖೆ ನಡುವೆ ಈಗ ಚರ್ಚೆ ನಡೆಯುತ್ತಿದೆ.