ದಾವಣಗೆರೆ: ಡಿಜಿಟಲ್ ಕೌಶಲವನ್ನು ಎಲ್ಲ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಬರವಣಿಗೆ ಕೌಶಲ, ಶಬ್ದಕೋಶ ಹಾಗೂ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಮಾಧ್ಯಮ ಕ್ಷೇತ್ರಗಳಲ್ಲಿ ಉನ್ನತಿ ಪಡೆಯಲು ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ
ಆಯೋಜಿಸಿದ್ದ ‘ಡಿಜಿಟಲ್ ಕೌಶಲ’ ಕುರಿತು ಎರಡು ತಿಂಗಳ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಯವನ್ನು ವ್ಯರ್ಥ ಮಾಡದೆ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಭಾರತದಲ್ಲಿ 30ರಿಂದ 35 ವರ್ಷದ ಒಳಗಿನ ಯುವಜನರು ಶೇ 90ರಷ್ಟು ಇದ್ದಾರೆ. ಅವರು ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಮೊದಲೆಲ್ಲ ಪತ್ರಿಕೆಗಳಲ್ಲಿ ವಿಜ್ಞಾನ ಕಲೆ, ಸಾಹಿತ್ಯ, ಮನರಂಜನೆ, ಸುದ್ದಿಗಳು ಅತಿ ಹೆಚ್ಚಾಗಿ ಪ್ರಕಟಗೊಳ್ಳುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಕೊಲೆ, ಅತ್ಯಾಚಾರ, ದರೋಡೆ, ಹಗರಣದ
ಸುದ್ದಿಗಳೇ ಹೆಚ್ಚಾಗಿವೆ ಎಂದು ವಿಷಾದಿಸಿದರು.
ವ್ಯವಹಾರ ನಿರ್ವಹಣೆ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಶಶಿಧರ್ ಆರ್., ‘ಈ ಡಿಜಿಟಲ್ ಕೌಶಲ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡರೆ ಭವಿಷ್ಯದಲ್ಲಿ ಹಲವಾರು ಉದ್ಯೋಗಾವಕಾಶಗು ತೆರೆದುಕೊಳ್ಳಲಿವೆ. ಡಿಜಿಟಲ್ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಫಿಕ್ ಡಿಸೈನರ್, ಪೇಜ್ ಮೇಕರ್, ಫಿಲ್ಮ್ ಇನ್ನು ಹಲವು ರೀತಿಯ ಕಲಿಕೆಗಳು ಕಾರ್ಯಾಗಾರದಲ್ಲಿ ಸಿಗಲಿವೆ’ ಎಂದು ತಿಳಿಸಿದರು.
ಪತ್ರಿಕೋದ್ಯಮ ಮತ್ತು ಸಮೂಹ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ ಅಧ್ಯಕ್ಷತೆ ವಹಿಸಿ, ‘ಲಾಕ್ಡೌನ್ ವಿದ್ಯಾರ್ಥಿಗಳ ಸಾಕಷ್ಟು ಕಲಿಕೆಯ ಅವಕಾಶಗಳನ್ನು ಕಿತ್ತುಕೊಂಡಿತು’ ಎಂದು ಬೇಸರ ವ್ಯಕ್ತಪಡಿಸಿದರು.
ಈ ಡಿಜಿಟಲ್ ಕೌಶಲ ಕಾರ್ಯಾಗಾರದಿಂದ ವಿದ್ಯಾರ್ಥಿಗಳಿಗೆ ಗ್ರಾಫಿಕ್ ಡಿಸೈನಿಂಗ್, ವಿಡಿಯೊ ಎಡಿಟಿಂಗ್, ಕಂಟೆಂಟ್ ರೈಟಿಂಗ್ ಫೋಟೊ ಮತ್ತು ವಿಡಿಯೊಗ್ರಫಿ ಹಾಗೂ ಮಾಧ್ಯಮಕ್ಕೆ ಸಂಬಂಧಿಸಿದ ಕೌಶಲಾಧಾರಿತ ಕಲಿಕೆಗಳನ್ನು ಈ ಕಾರ್ಯಾಗಾರದಲ್ಲಿ ಕಲಿಸಲಾಗುತ್ತದೆ. ಜೊತೆಗೆ ವಿಶ್ವವಿದ್ಯಾಲಯದಿಂದ ಕಾರ್ಯಾಗಾರದ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ, ಪ್ರಾಧ್ಯಾಪಕ ವಿನಯ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ್ ಸ್ವಾಗತಿಸಿದರು. ವೀರೇಶ್ ವಂದಿಸಿದರು. ಸಹ ಸಂಯೋಜಕರಾದ ವೆಂಕಟೇಶ್ ಬಿ.ಎಂ., ಗಂಗಾಧರ್ ಸಬೋಜಿ, ಲಾವಣ್ಯ ಕೆ.ಎಂ. ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.