ದಾವಣಗೆರೆ: ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಅಧ್ಯಾತ್ಮ, ಆಚಾರ, ವಿಚಾರಗಳಿಂದಾಗಿ ಭಾರತವು ವಿಶ್ವಗುರು ಆಗಿದೆ ಎಂದು ಕಣ್ವಕುಪ್ಪೆ ಗವಿಮಠ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದೂ ಪರಿಷದ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ವತಿಯಿಂದ ಬೀರಲಿಂಗೇಶ್ವರ ದೇವಸ್ಥಾನ ಬಳಿ ಆಯೋಜಿಸಿದ್ದ ಅಂಬುಛೇದನ ಹಾಗೂ ಸಾರ್ವಜನಿಕ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ದೇವರು ಮತ್ತು ಮೃತ್ಯುವನ್ನು ನೆನಪಿಟ್ಟುಕೊಳ್ಳಬೇಕು. ನಾವು ಮಾಡಿದ ಉಪಕಾರ ಮತ್ತು ನಮಗೆ ಬೇರೆಯವರು ಮಾಡಿದ ಅಪಕಾರವನ್ನು ಮರೆಯಬೇಕು. ಇದುವೇ ವೇದಗಳ ಸಾರ. ಧರ್ಮದ ದಾರಿಯಲ್ಲಿ ಎಲ್ಲರೂ ನಡೆಯಬೇಕು ಎಂದು ತಿಳಿಸಿದರು.
ಹಿಂದೂ ಜಾಗರಣ ವೇದಿಕೆಯ ಪ್ರಾಂತ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ‘ನಮ್ಮೊಳಗೆ ಇರುವ ದುಷ್ಟಶಕ್ತಿಯನ್ನು ನಿಗ್ರಹಿಸಬೇಕು. ಜಾತಿ, ಧರ್ಮ, ವರ್ಗ, ಭಾಷೆ, ಊರು, ದೇವರ ಹೆಸರಲ್ಲಿ ಛಿದ್ರ ಮಾಡುವ ಶಕ್ತಿಗಳನ್ನು ಸುಟ್ಟು ಹಾಕಬೇಕು’ ಎಂದರು.
ಜಗತ್ತಿನ 46 ಸಂಸ್ಕೃತಿಗಳನ್ನು ನಾಶ ಮಾಡಿದ ಧರ್ಮದ ಭಯೋತ್ಪಾದಕರು ಈಗ ಭಾರತದ 23 ರಾಜ್ಯಗಳಲ್ಲಿ ತಮ್ಮ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಕ್ರಿಮಿನಲ್ ಫ್ರಂಟ್ ಆಫ್ ಇಸ್ಲಾಂ, ಪಾಯಿಸನ್ ಫ್ರಂಟ್ ಆಫ್ ಇಂಡಿಯಾ ಸಹಿತ ಕೆಲವು ಸಂಘಟನೆಗಳು ಈ ಕೆಲಸಗಳನ್ನು ಮಾಡುತ್ತಿವೆ. ಹಿಂದು, ಹಿಂದುತ್ವ, ಹಿಂದೂಸ್ಥಾನ ಉಳಿದರೆ ಮಾತ್ರ ಎಲ್ಲರೂ ಉಳಿಯಲು ಸಾಧ್ಯ ಎಂದು ಹೇಳಿದರು.
ಸಮಾಜ ರಕ್ಷಣೆಗೆ ಎಲ್ಲರೂ ಪೊಲೀಸರಾಗಬೇಕು. ಶಕ್ತಿ ಇದ್ದರೆ ಮಾತ್ರ ಮುಕ್ತಿ. ಶಕ್ತಿ ಇದ್ದರೆ ಸಾಧನೆ, ಸಮನ್ವಯತೆ, ಶಾಂತಿ, ಭದ್ರತೆ ಸಾಧ್ಯ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಂಬು ಛೇದನ ಮಾಡಿದರು. ಬಳಿಕ ಗವಿಮಠದ ಸ್ವಾಮೀಜಿ ಬನ್ನಿ ವಿತರಿಸಿದರು. ಜೆ.ಕೆ. ಕೊಟ್ರಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಸತೀಶ್ ಪೂಜಾರಿ, ಮೇಯರ್ ಜಯಮ್ಮ ಗೋಪಿನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಉಪಸ್ಥಿತರಿದ್ದರು. ಶೋಭಾ ಪದಕಿ ಪ್ರಾರ್ಥನೆ ಮಾಡಿದರು. ಸಹನಾ ಮಂಜುನಾಥ ವಂದೇ ಮಾತರಂ ಹಾಡಿದರು. ರಾಜಶೇಖರ ಎನ್. ಸ್ವಾಗತಿಸಿದರು. ಶಿವನಗೌಡ ಟಿ. ಪಾಟೀಲ್ ವಂದಿಸಿದರು. ಗಿರೀಶ್ ಯು. ಕಾರ್ಯಕ್ರಮ ನಿರೂಪಿಸಿದರು.