ದಾವಣಗೆರೆ: ಉಪಚುನಾವಣೆಯನ್ನು ಬಿಜೆಪಿ ಹಣಬಲ ಮತ್ತು ಅಧಿಕಾರದ ದುರುಪಯೋಗದಿಂದ ಗೆದ್ದಿದೆ. ಈ ಫಲಿತಾಂಶದ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿರುವ ಸಿದ್ದರಾಮಯ್ಯನವರು ಮತ್ತು ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಮನವಿ ಮಾಡಿದೆ.
ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಣ ಮತ್ತು ಅಧಿಕಾರದ ಆಸೆ ತೋರಿಸಿ ಬಿಜೆಪಿ ಖರೀದಿಸಿತ್ತು. ಅವರನ್ನು ಗೆಲ್ಲಿಸಲು ಹಣಬಲ ಮತ್ತು ಅಧಿಕಾರದ ದುರುಪಯೋಗ ಪಡಿಸಿಕೊಂಡಿದೆ. ಇಂತಹ ಪ್ರಜಾಪ್ರಭುತ್ವ ವಿರೋಧಿಯ ಸರ್ಕಾರವನ್ನು ತೊಲಗಿಸಲು ಪಣತೊಟ್ಟು ಪ್ರಚಾರ ನಡೆಸಲಾಯಿತು.ಆದರೂ ಪಕ್ಷ ಸೋಲನ್ನಭವಿಸಿತು. ಇದಕ್ಕೆ ಯಾರನ್ನೂ ಹೊಣೆ ಮಾಡುವುದು ಬೇಡ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಮತ್ತು ಎಐಸಿಸಿಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಅಯೂಬ್ ಪೈಲ್ವಾನ್, ಎ. ನಾಗರಾಜ್, ಚಮನ್ ಸಾಬ್, ಸೈಯದ್ ಚಾರ್ಲಿ, ಜಾಕಿರ್ ಅಲಿ, ಶಫೀಕ್ ಪಂಡಿತ್, ದಾದಾಪೀರ್, ಕೆ.ಜಿ. ಶಿವಕುಮಾರ್, ಮುಜಾಹಿದ್, ಕೆ.ಎಲ್. ಹರೀಶ್, ಡೋಲಿ ಚಂದ್ರು ಅವರೂ ಇದ್ದರು.