ದಾವಣಗೆರೆ: ಸ್ಮಾರ್ಟ್ಸಿಟಿ ಯೋಜನೆಯಡಿ ನಡೆಯುತ್ತಿರುವ ಎನ್.ಆರ್. ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ನಿತ್ಯ ಸಂಚರಿಸುವ ನಾಗರಿಕರಿಗೆ ತೊಂದರೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಬೇಕು ಎಂದು ಆಗ್ರಹಿಸಿ ನರಸರಾಜ ರಸ್ತೆ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ನೇತೃತ್ವದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ನರಸರಾಜಪೇಟೆ ಗಣಪತಿ ದೇವಸ್ಥಾನದ ಬಳಿಯಿಂದ ಚೌಕಿಪೇಟೆ ಚೌಡಮ್ಮ ದೇವಿಯ ದೇವಸ್ಥಾನದ ಬೇವಿನಮರದ ವರೆಗೆ ಬೃಹತ್ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ವ್ಯಾಪಾರಿಗಳು ಐನೂರಕ್ಕೂ ಅಧಿಕ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಳಿಕ ರಸ್ತೆ ಬಂದ್ ಮಾಡಿ ಕುಳಿತು ಧರಣಿ ನಡೆಸಿದರು.
ಕಾಮಗಾರಿ ಆರಂಭಗೊಂಡು ಐದು ತಿಂಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ನಡೆದಾಡುವುದೇ ಸಮಸ್ಯೆಯಾಗಿದೆ. ಹಲವರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಸ್ಥಳಕ್ಕೆ ಸ್ಮಾರ್ಟ್ಸಿಟಿ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಒಂದು ತಿಂಗಳ ಒಳಗೆ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದರು. ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು. ಹೊಂಡಗುಂಡಿ ಮಾಡುವಲ್ಲಿ ಅದಕ್ಕೆ ಗುರುತಾಗಿ ಆವರಣ ಪಟ್ಟಿ ಕಟ್ಟಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇವೆಲ್ಲ ಬೇಡಿಕೆಗಳಿಗೆ ಸ್ಮಾರ್ಟ್ಸಿಟಿ ಅಧಿಕಾರಿಗಳು ಸ್ಪಂದಿಸಿದ್ದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪಾಲಿಕೆ ಸದಸ್ಯ ಮಂಜಮ್ಮ, ಉದ್ಯಮಿ ಅಥಣಿ ವೀರಣ್ಣ, ಜಗದ್ಗುರು ಜಯವಿಭವ ವಿದ್ಯಾಸ್ಥೆಯ ಸಹಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ, ನರಸರಾಜಪೇಟೆ, ಚೌಕಿಪೇಟೆಯ ವರ್ತಕರು, ವಿದ್ಯಾರ್ಥಿಗಳು ಇದ್ದರು.