ಚನ್ನಗಿರಿ: ತಾಲ್ಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಆನೆಗಳು ನೀರು ಮತ್ತು ಆಹಾರವನ್ನು ಹುಡುಕಿಕೊಂಡು ಬರುತ್ತಿದ್ದು, ಈ ವೇಳೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ.
ಕಾಡಂಚಿನ ಗ್ರಾಮಗಳಾದ ಮರವಂಜಿ, ಹಲಕನಾಳ್, ಗಂಡುಗನಹಂಕಲು, ಮೇದುಗೊಂಡನಹಳ್ಳಿ ಗ್ರಾಮಗಳಿಗೆ ವಾರದಿಂದ ಭದ್ರಾ ಅರಣ್ಯ ಪ್ರದೇಶದಿಂದ 3 ಕಾಡಾನೆಗಳು ವಾರಕೊಮ್ಮೆ ಬಂದು ರೈತರ ಬೆಳೆಯನ್ನು ನಾಶಪಡಿಸುತ್ತಿವೆ.
ಶುಕ್ರವಾರ ರಾತ್ರಿ ಮರವಂಜಿ ಗ್ರಾಮದ ರೈತರೊಬ್ಬರ ತೋಟಕ್ಕೆ ನುಗ್ಗಿದ ಕಾಡಾನೆ 15 ಬಾಳೆಗಿಡ ಹಾಗೂ 6 ಅಡಿಕೆ ಗಿಡಗಳನ್ನು ನಾಶಪಡಿಸಿದೆ. ಕಾಡಾನೆ ಕಾಣಿಸಿಕೊಂಡಿರುವ ಗ್ರಾಮಗಳಲ್ಲಿ ಅರಣ್ಯ ಸಿಬ್ಬಂದಿ ಪ್ರತಿ ದಿನವೂ ಪಟಾಕಿ ಸಿಡಿಸಿ, ಅಲ್ಲಲ್ಲಿ ಬೆಂಕಿ ಹಾಕಿ ಕಾಡಾನೆ ಗ್ರಾಮದೊಳಗೆ ಬರದಂತೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬೆಳೆ ಹಾನಿಗೊಳಗಾದ ರೈತರಿಗೆ ಅರಣ್ಯ ಇಲಾಖೆಯಿಂದ ಬೆಳೆ ನಷ್ಟ ಪರಿಹಾರ ನೀಡಲಾಗುವುದು. ಕಾಡಂಚಿನ ಗ್ರಾಮಗಳ ಜನರು ಸಂಜೆಯ ವೇಳೆ ಹಾಗೂ ಬೆಳಗಿನ ಸಮಯದಲ್ಲಿ ತೋಟ ಹಾಗೂ ಜಮೀನುಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಕಾಡಾನೆಗಳ ತಡೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ವಲಯ ಅರಣ್ಯಾಧಿಕಾರಿ ಮಧುಸೂದನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.