ದಾವಣಗೆರೆ: ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವಧಿಯನ್ನು 200 ಮಾನವ ದಿನಗಳಿಗೆ ಹೆಚ್ಚಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ನೇತೃತ್ವದಲ್ಲಿ ಕೂಲಿಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಿ.ಬಿ.ರಸ್ತೆಯ ಶನಿ ಮಹಾತ್ಮ ದೇವಾಲಯದಿಂದ ಹೊರಟ ಕೂಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಿದರು.
‘ಲಾಕ್ಡೌನ್ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸವಿಲ್ಲದೇ ತಮ್ಮ ಊರುಗಳಿಗೆ ಮರಳಿದ್ದು, ಅವರು ಕಷ್ಟದಲ್ಲಿ ಇದ್ದಾರೆ. ಸಾವಿರಾರು ಕುಟುಂಬಗಳು ಈಗಾಗಲೇ 100 ದಿನಗಳನ್ನು ಮುಗಿಸಿದ್ದು, ವಲಸೆ ಬಂದವರು ಹಾಗೂ ಕುಟುಂಬದ ಸದಸ್ಯರಿಗೆ ಉದ್ಯೋಗವಿಲ್ಲದೇ ಸಂಕಷ್ಟದಲ್ಲಿ ಇದ್ದಾರೆ. ಇದರೊಂದಿಗೆ ಅತಿವೃಷ್ಟಿಯೂ ಇವರ ಬದುಕನ್ನು ಬೀದಿಗೆ ತಳ್ಳಿದೆ’ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.
ಪಡಿತರ ವಿತರಣೆಯಲ್ಲಿ ಒಬ್ಬರಿಗೆ ತಲಾ 5 ಕೆ.ಜಿ. ಹೆಚ್ಚಿನ ಆಹಾರಧಾನ್ಯವನ್ನು ಆರು ತಿಂಗಳು ನೀಡಬೇಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಲಿ ಕೆಲಸ ಕೊಡಬೇಕು’ ಎಂದು ಆಗ್ರಹಿಸಿದರು.