ದಾವಣಗೆರೆ: ಯಶವಂತಪುರದಿಂದ ದೆಹಲಿಗೆ ಹೋಗುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಕೆಟ್ಟಿದ್ದರಿಂದ ಚಿಕ್ಕಜಾಜೂರು–ದಾವಣಗೆರೆ ಮಧ್ಯೆ ಹನುಮನಹಳ್ಳಿಯಲ್ಲಿ 2 ಗಂಟೆಗೂ ಅಧಿಕ ಸಮಯ ನಿಂತಿತ್ತು. ಚಿಕ್ಕಜಾಜೂರು ರೈಲು ನಿಲ್ದಾಣದಿಂದ ಎಂಜಿನ್ ತರಿಸಿ ಕೆಟ್ಟಿರುವ ಎಂಜಿನ್ ಬದಲಾಯಿಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿತು.
12629 ಸಂಖ್ಯೆಯ ರೈಲು ಯಶವಂತಪುರದಿಂದ ಮಧ್ಯಾಹ್ನ 2.30ಕ್ಕೆ ಹೊರಟಿತ್ತು. 7 ಗಂಟೆಗೆ ದಾವಣಗೆರೆಗೆ ತಲುಪಬೇಕಿತ್ತು. 6.45ರ ಸುಮಾರಿಗೆ ದಾವಣಗೆರೆಗಿಂತ ಸುಮಾರು 15 ಕಿಲೋಮೀಟರ್ ಹಿಂದೆಯೇ ರೈಲು ಕೆಟ್ಟು ನಿಂತಿತು. ಚಲಿಸದ ರೈಲಿನಲ್ಲಿ ಕಾದು ಕುಳಿತು ಪ್ರಯಾಣಿಕರು ಸುಸ್ತಾದರು. ಎಂಜಿನ್ ಬದಲಾಯಿಸಿದ ಬಳಿಕ ರಾತ್ರಿ 9ಕ್ಕೆ ದಾವಣಗೆರೆಗೆ ತಲುಪಿತು.
ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ ಸಹಿತ ವಿವಿಧ ಪ್ರದೇಶಗಳ ಜನರು ತಡವಾಗಿ ಮನೆ ಸೇರಿದರು.