ದಾವಣಗೆರೆ: ವಿಶ್ವಸಂಸ್ಥೆಯ ಘೋಷಣೆಯಂತೆ 2030ರ ಒಳಗೆ ಪರಿಸರ ವ್ಯವಸ್ಥೆ ಮರುಸ್ಥಾಪನೆ ಆಗಬೇಕು ಎಂದು ಹಿರಿಯ ವಕೀಲ ಎಲ್.ಎಚ್. ಅರುಣ್ ಕುಮಾರ್ ಹೇಳಿದರು.
ಆವರಗೆರೆ ಗ್ರಾಮದಲ್ಲಿ ಕಾಯಕ ಯೋಗಿ ಬಸವ ಪರಿಸರ ವೇದಿಕೆ, ವಿಜ್ಞಾನ ಪರಿಷತ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಕೋವಿಡ್ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ನೈಸರ್ಗಿಕ ಪರಿಸರವನ್ನು ಅದರ ಮೂಲ ಸ್ಥಿತಿಗೆ ಕೊಂಡೊಯ್ದು ಮರು ಸ್ಥಾಪಿಸುವುದು ಪರಿಸರ ದಿನಾಚರಣೆಯ ಉದ್ದೇಶ. ಕರ್ನಾಟಕದ ಪಶ್ಚಿಮ ಘಟ್ಟಗಳಿಂದ ಹಿಡಿದು, ಬ್ರೆಜಿಲ್ನ ಅಮೆಜಾನ್ನಂತಹ ಜೀವ ವೈವಿಧ್ಯದ ಆಧಾರಗಳು ನಾಶವಾಗುತ್ತಿವೆ. ಪರಿಸರದ ಅಮೂಲ್ಯ ಸಂಪನ್ಮೂಲ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನಿಸರ್ಗ ನೀಡುವ ಗಾಳಿ ನೀರು ಅನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ. ಈ ಕಾರಣ ನೈಸರ್ಗಿಕ ಸಮತೋಲನ ಕಾಪಾಡುವುದು ಜಾಗತಿಕ ಸವಾಲು ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ವೇದಿಕೆ ಅಧ್ಯಕ್ಷ ಗಿರೀಶ್ ದೇವರಮನೆ ಮಾತನಾಡಿದರು.
ಪಾಲಿಕೆ ಮಾಜಿ ಸದಸ್ಯ ಎಚ್.ಜಿ. ಉಮೇಶ್, ಕಾಯಕ ಯೋಗಿ ಬಸವ ಪರಿಸರ ವೇದಿಕೆಯ ನಾಯಕನಹಟ್ಟಿ ರುದ್ರಪ್ಪ, ವಿಜ್ಞಾನ ಪರಿಷತ್ತಿನ ಗುರುಸಿದ್ದಸ್ವಾಮಿ, ಪರಿಸರ ವೇದಿಕೆ ಕಾರ್ಯದರ್ಶಿ ಬಾನಪ್ಪ, ಕಾಯಕ ಯೋಗಿ ಬಸವ ಪರಿಸರ ವೇದಿಕೆ ಸದಸ್ಯರು, ಆಶಾ ಕಾರ್ಯಕರ್ತರು ಇದ್ದರು.
ಮಾಸ್ಕ್ ಧರಿಸುವ ಬಗ್ಗೆ, ಅಂತರ ಕಾಯ್ದುಕೊಳ್ಳುವ ಬಗ್ಗೆ, ಸಾನಿಟೈಸರ್ ಬಳಕೆ ಬಗ್ಗೆ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು.