ದಾವಣಗೆರೆ: 3000ಕ್ಕೂ ಹೆಚ್ಚು ಸಾಲುಮರಗಳನ್ನು ಬೆಳೆಸಿದ್ದ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ ಅವರು ತಾಲ್ಲೂಕಿನ ಮಿಟ್ಲಕಟ್ಟೆಯಲ್ಲಿ ಸೋಮವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯೊಂದರ ಅವ್ಯವಹಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯ ಸಿಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕಂದಿನಲ್ಲಿಯೇ ಪರಿಸರದಲ್ಲಿ ಆಸಕ್ತಿ ಬೆಳೆಸಿಕೊಂಡ ವೀರಾಚಾರಿ, ಅವರು ಶಾಮನೂರಿನಿಂದ ಮಿಟ್ಲಕಟ್ಟೆಯವರೆಗೂ ಮರಗಳನ್ನು ಬೆಳೆಸಿ ಅವುಗಳನ್ನು ಜತನದಿಂದ ಕಾಯ್ದುಕೊಂಡು ಬಂದಿದ್ದರು.
ಸಭೆ, ಸಮಾರಂಭಗಳಲ್ಲಿ ಗಿಡಗಳನ್ನೇ ಕೊಡುಗೆಯಾಗಿ ನೀಡುತ್ತಿದ್ದರು. ಶಾಲೆಗಳು, ಉದ್ಯಾನ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳ ಬಳಿ ಗಿಡಗಳನ್ನು ನೆಡುತ್ತಿದ್ದ ಇವರು, ಯಾರೇ ಕೇಳಿದರೂ ಗಿಡಗಳನ್ನು ಕೊಡುತ್ತಿದ್ದರು. ಸ್ವಂತ ಆಟೋದಲ್ಲಿ ಧ್ವನಿವರ್ಧಕದಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದರು.
ಇವರ ಸೇವೆಯನ್ನು ಗುರುತಿಸಿ ರಾಜ್ಯಸರ್ಕಾರ 1999-2000ರ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.