ದಾವಣಗೆರೆ: ‘ಈಶ್ವರಪ್ಪ ಎಲ್ಲಿದ್ದೀಯಪ್ಪ’, ಎಲ್ಲಿದ್ದೀಯಪ್ಪ ಎಲ್ಲಿದ್ದೀಯಪ್ಪ ಈಶ್ವರಪ್ಪ ಎಲ್ಲಿದ್ದೀಯಪ್ಪ’, ‘ಹುಡುಕಿಕೊಡಿ, ಹುಡುಕಿಕೊಡಿ ಈಶ್ವರಪ್ಪನ ಹುಡುಕಿಕೊಡಿ’, ‘ಉಸ್ತುವಾರಿ ಉಸ್ತುವಾರಿ ಯಾವ ಜಿಲ್ಲೆಯ ಉಸ್ತುವಾರಿ’.
ಹೀಗೆ ತರಹೇವಾರಿ ಘೋಷಣೆಗಳನ್ನು ಕಾಂಗ್ರೆಸ್ ಮುಖಂಡರು ಕೂಗುತ್ತಾ, ಈಶ್ವರಪ್ಪನ ಛಾಯಾಚಿತ್ರ ಇರುವ ಫಲಕಗಳನ್ನು ಪ್ರದರ್ಶಿಸಿದರು. ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ, ಪದಾಧಿಕಾರಿಗಳ ನೇಮಕ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿಯೇ ಈ ಅಣಕು ಪ್ರತಿಭಟನೆ ನಡೆಯಿತು.
ಸಿದ್ದೇಶ್ವರ ಕಾರಣ?: ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ ಈಶ್ವರಪ್ಪ ಬೀದಿ ಬೀದಿಗಳಲ್ಲಿ ಸಿಗುತ್ತಿದ್ದರು. ಚುನಾವಣೆ ಮುಗಿದ ಬಳಿಕ ನಾಪತ್ತೆಯಾದವರು ಈವರೆಗೆ ಪತ್ತೆಯಾಗಿಲ್ಲ. ಕೊರೊನಾದಂಥ ವೈರಸ್ ಹರಡುತ್ತಿರುವ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಬೇಕಿತ್ತು. ಆದರೆ ಜಿಲ್ಲೆಗೆ ಬರುತ್ತಿಲ್ಲ. ಸಂಸದರಾಗಿರುವ ಜಿ.ಎಂ. ಸಿದ್ದೇಶ್ವರ ಅವರೇ ಜಿಲ್ಲಾ ಉಸ್ತುವಾರಿ ಸಚಿವರಂತೆ ವರ್ತಿಸುತ್ತಿರುವುದರಿಂದ ಅವರಿಗೆ ಅವಮಾನವಾಗಿ ಬರುವುದನ್ನು ನಿಲ್ಲಿಸಿರಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬಂದು ಜನರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಉಸ್ತುವಾರಿ ಸಚಿವ ಸ್ಥಾನ ಬಿಟ್ಟು ತೊಲಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ‘ಜಿ.ಎಂ. ಸಿದ್ದೇಶ್ವರ ಮತ್ತು ರೇಣುಕಾಚಾರ್ಯ ಅವರೇ ಪರ್ಸಂಟೇಜ್ ಹಂಚಿಕೊಳ್ಳುತ್ತಿರುವುದರಿಂದ ತನಗೆ ಏನೂ ಸಿಗುತ್ತಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಇತ್ತ ತಲೆ ಹಾಕುತ್ತಿಲ್ಲ. ಮುಖ್ಯಮಂತ್ರಿಯನ್ನು ಬ್ಲಾಕ್ಮೇಲ್ ಮಾಡುವ ರಾಜಕಾರಣ ಮಾಡಿಕೊಂಡು ಬಂದಿರುವ ರೇಣುಕಾಚಾರ್ಯ ಒಬ್ಬ ಹಾಸ್ಯಾಸ್ಪದ ವ್ಯಕ್ತಿ’ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡರಾದ ಎ. ನಾಗರಾಜ್, ಕೆ.ಜೆ. ಶಿವಕುಮಾರ್, ಕೆ.ಎಸ್. ಬಸವಂತಪ್ಪ, ದೇವರಮನಿ ಶಿವಕುಮಾರ್, ರಾಘು ದೊಡ್ಮನಿ, ಕೆ. ಚಮನ್ಸಾಬ್, ಲತೀಫ್ ಸಾಬ್, ಸಯ್ಯದ್ ಚಾರ್ಲಿ, ಜಾಕಿರ್ ಅಲಿ, ಪ್ರಕಾಶ್, ಸೋಮ್ಲಾಪುರ ಹನುಮಂತಪ್ಪ, ಮಂಜುನಾಥ್, ಮುಮ್ತಾಜ್ ಬೇಗಂ ಅವರೂ ಇದ್ದರು.