ದಾವಣಗೆರೆ:ಪರವಾನಗಿ ಇಲ್ಲದೇ ಇರುವ ವ್ಯಕ್ತಿಗಳಿಗೆ ಸ್ಫೋಟಕ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಇಲ್ಲಿನ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯದ ಮಹಬೂಬ್ ನಗರ ಜಿಲ್ಲೆಯ ರಾಮರೆಡ್ಡಿ ಹಾಗೂ ಆಂಧ್ರಪ್ರದೇಶದ ಕರ್ನೂಲ್ ನಗರದ ಅನುಮುಲ್ ಶಿವಕುಮಾರ್ ಬಂಧಿತರು.
ತಾಲ್ಲೂಕಿನ ಕಾಡಜ್ಜಿ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣದ ಸಂಬಂಧ ಈಚೆಗೆ ನಡೆದ ಕಾರ್ಯಾಚರಣೆಯಲ್ಲಿ ಈಚೆಗೆ ಬಂಧಿತನಾಗಿರುವ ರಾಯಚೂರು ಜಿಲ್ಲೆಯ ಮಾನ್ವಿಯ ವ್ಯಕ್ತಿಗೆ ಇವರು ಸ್ಫೋಟಕಗಳನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.
ಹೈದರಾಬಾದ್ ಮತ್ತು ಕರ್ನೂಲ್ ನಗರದಲ್ಲಿ ಇವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ.ವಿ. ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿಐ ಲಿಂಗನಗೌಡ ನೆಗಳೂರು, ಪಿಎಸ್ಐ ಪುಷ್ಪಲತಾ, ಸಿಬ್ಬಂದಿ ದೇವೆಂದ್ರನಾಯ್ಕ, ಮಂಜನಗೌಡ, ಮಹೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.