ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆವಿಮೆಯಿಂದ ರೈತರಿಗೆ ಮೂರುಕಾಸಿನ ಪ್ರಯೋಜನವಿಲ್ಲ

ಸರ್ಕಾರವೇ ನೇರವಾಗಿ ಕಂತು ಕಟ್ಟಿಸಿಕೊಳ್ಳಲಿ: ಸಿರಿಗೆರೆ ಶ್ರೀ
Last Updated 25 ಡಿಸೆಂಬರ್ 2018, 12:26 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಅರ್ಥವಿಲ್ಲದಂತಾಗಿದೆ. ಈ ಯೋಜನೆಯಿಂದ ರೈತರಿಗೆ ಮೂರುಕಾಸಿನ ಪ್ರಯೋಜನವೂ ಆಗುತ್ತಿಲ್ಲ’ ಎಂದು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಕ್ಕರಗೊಳ್ಳದಲ್ಲಿ ಶ್ರೀ ಮಹೇಶ್ವರ ದೇವಸ್ಥಾನವನ್ನು ಮಂಗಳವಾರ ಉದ್ಘಾಟಿಸಿದ ಅವರು, ‘ಬೆಳೆವಿಮೆ ಸಮಸ್ಯೆ ಕುರಿತು ಚರ್ಚಿಸಲು ಕೃಷಿ ಸಚಿವರ ಸಮ್ಮುಖದಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿ ದಿಗಿಲು ಹುಟ್ಟಿಸಿತು. ಚಿತ್ರದುರ್ಗ ಜಿಲ್ಲೆಯಲ್ಲಿ ವಿಮಾ ಕಂಪನಿಗೆ ₹ 112 ಕೋಟಿ ಕಂತು ಪಾವತಿಸಲಾಗಿದ್ದು, ರೈತರಿಗೆ ಕೇವಲ ₹ 22 ಕೋಟಿ ಪರಿಹಾರ ವಿತರಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ವಿಮಾ ಕಂಪನಿಗೆ ₹ 90 ಕೋಟಿ ಜಮಾ ಆಗಿದೆ. ಆದರೆ, ₹ 11 ಕೋಟಿ ಪರಿಹಾರ ಮಾತ್ರ ವಿತರಣೆಯಾಗಿದೆ. ಬಾಕಿ ಹಣ ವಿಮಾ ಕಂಪನಿ ಪಾಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿಮಾ ಕಂಪನಿಗಳು ಲಾಭಕ್ಕಾಗಿ ಕೆಲಸ ಮಾಡುತ್ತವೆ. ಹೀಗಾಗಿ ಸರ್ಕಾರವೇ ವಿಮೆ ಕಂತು ಕಟ್ಟಿಸಿಕೊಳ್ಳಬೇಕು. ಶೇ 2ರ ಬದಲು ಶೇ 4ರಷ್ಟು ಕಂತಿನ ಹಣವನ್ನು ರೈತರಿಂದ ಕಟ್ಟಿಸಿಕೊಳ್ಳಲಿ. ಸರ್ಕಾರ ಹಣ ಪಾವತಿಸುವ ಮೂಲಕ ವಿಮಾ ಕಂಪನಿಗಳ ಮಹಾಪೋಷಕ ಏಕೆ ಆಗಬೇಕು’ ಎಂದು ಪ್ರಶ್ನಿಸಿದರು.

‘ಸರ್ಕಾರಕ್ಕೆ ಲಾಭ–ನಷ್ಟದ ಪ್ರಶ್ನೆ ಇಲ್ಲ. ಹೀಗಾಗಿ ವಿಮಾ ಕಂಪನಿಗಳಿಂದ ಹಣ ಪಾವತಿಸಬಾರದು; ಸರ್ಕಾರವೇ ವಿಮೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಶಾಸಕರು, ಸಚಿವರು ಪಟ್ಟು ಹಿಡಿಯಬೇಕು’ ಎಂದು ಸಲಹೆ ನೀಡಿದರು.

ಶೇ 75ರಷ್ಟು ಬೆಳೆ ಹಾನಿಯಾಗಿದ್ದರೂ ವಿಮೆ ಪರಿಹಾರ ಹಣ ಏಕೆ ಕಡಿಮೆ ಪಾವತಿಯಾಗಿದೆ ಎಂಬ ಬಗ್ಗೆ ಪರಿಶೀಲಿಸಲು ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಅಧ್ಯಯನ ತಂಡವನ್ನು ಕಳುಹಿಸಿಕೊಡಲು ಕೃಷಿ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರ ಯೋಜನೆಯಲ್ಲಿನ ತಪ್ಪನ್ನು ಸರಿಪಡಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT