ಜಗಳೂರು: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿದ್ದು, ಎರಡು ತಿಂಗಳು ಕಳೆದಿದ್ದರೂ ಹಣ ಪಾವತಿಸದೆ ಸತಾಯಿಸಲಾಗುತ್ತಿದೆ ಎಂದು ಆರೊಪಿಸಿ ರೈತರು ಶನಿವಾರ ಇಲ್ಲಿನ ಎಪಿಎಂಸಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಎರಡು ತಿಂಗಳ ಹಿಂದೆ ರಾಗಿ ಖರೀದಿಸಿದ್ದು, ಇದುವರೆಗೂ ಹಣ ಪಾವತಿಸದೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಬಡ ರೈತರ ಅನುಕೂಲಕ್ಕಾಗಿ ಸರ್ಕಾರ ರಾಗಿ ಖರೀದಿ ಕೇಂದ್ರ ತೆರೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಹಣ ಪಾವತಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಂತೋಷ್ ಕುಮಾರ್, ದಾಖಲೆಗಳನ್ನು ಪರಿಶೀಲಿಸಿ ಹಣಪಾವತಿಸಲು ಎಪಿಎಂಸಿ ಸಿಬ್ಬಂದಿಗೆ ಸೂಚಿಸಿದರು.
ರೈತ ಮುಖಂಡರಾದ ಬಸವರಾಜ, ರವಿಕುಮಾರ, ಹೊಸಕೆರೆ ಕಲ್ಲೇಶ್, ಗೌರಿಪುರ ಸುರೇಶ್, ಉದ್ಘಟ್ಟ ಬಸವರಾಜ್, ಗಡಿಮಾಕುಂಟೆ, ಚಿಕ್ಕ ಬನ್ನಿ ಹಟ್ಟಿ, ಕೆಚ್ಚೇನಹಳ್ಳಿ, ಮೆದಿಕೇರನಹಳ್ಳಿ, ಬಸಪ್ಪನಹಟ್ಟಿ ಗ್ರಾಮದ ರೈತರು ಭಾಗವಹಿಸಿದ್ದರು.