‘ನಾವು ಎಳೆಯ ಪ್ರಾಯದವರು. ಸ್ವಾತಂತ್ರ್ಯ ಅಂದರೆ ಏನು ಎಂಬುದು ಗೊತ್ತಾಗುವ ಮೊದಲೇ ಹಿರಿಯರ ಜತೆಗೆ ಹೋರಾಟದಲ್ಲಿ ನುಗ್ಗಿದ್ದೆವು. ಹಿರಿಯ ಹೋರಾಟಗಾರರು ಏನು ಹೇಳುತ್ತಾರೋ ಅದನ್ನು ಮಾಡುವುದು ನಮ್ಮ ಕೆಲಸವಾಗಿತ್ತು. ಸ್ವಾತಂತ್ರ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಭಿತ್ತಿಪತ್ರ ಅಂಟಿಸಿ ಅಂದರೆ ಅಂಟಿಸುತ್ತಿದ್ದೆವು. ಕಲ್ಲು ಬಿಸಾಡಿ ಎಂದರೆ ಬಿಸಾಡುತ್ತಿದ್ದೆವು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಹಿರಿಯ ಹೋರಾಟಗಾರರ ಜತೆಗೆ ನಮ್ಮನ್ನೂ ಬಂಧಿಸಿದ್ದರು. ಆದರೆ ಮಕ್ಕಳು ಎಂಬ ಕಾರಣಕ್ಕೆ ನಮ್ಮನ್ನು ಒಂದು ದಿನ ಮಾತ್ರ ಜೈಲಲ್ಲಿ ಇಟ್ಟು ಬಿಡುಗಡೆ ಮಾಡಿದರು’ ಎಂದು ಬೂದಿಹಾಳ್ ರಸ್ತೆ ಗರಬೇರ ಕಣದ ನಿವಾಸಿ 93ರ ಹರೆಯದ ಬಿ. ಹಾಲಪ್ಪ, ಮತ್ತೊಬ್ಬ ಹೋರಾಟಗಾರ ಹಳೇಬಿಸಲೇರಿಯ ಬಿ.ಎನ್. ಚನ್ನಬಸಪ್ಪ ನೆನಪಿಸಿಕೊಂಡರು.