ದಾವಣಗೆರೆ: ಮನೆಯ ಮುಂದೆ ಅಳವಡಿಸಿದ್ದ ವಿದ್ಯುತ್ ಮೀಟರ್ ಬಳಿ ಇರುವ ಕಬ್ಬಿಣದ ನಳದ ಮೇಲೆ ಕಾಲಿಟ್ಟ ಬಾಲಕಿಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ.
ರಜಾವುಲ್ಲಾ ಮುಸ್ತಫಾ ನಗರದ ಜುಬೇರ್ ಅವರ ಪುತ್ರಿ ತೈಯಬಾ(8) ಮೃತ ಬಾಲಕಿ
ಬುಧವಾರ ಮಧ್ಯಾಹ್ನ 3.30ರಲ್ಲಿ ಮಳೆ ಬರುತ್ತಿದ್ದ ವೇಳೆ ಮನೆಯ ಮುಂದೆ ಮೆಟ್ಟಿಲಿಗೆ ಅಳವಡಿಸಿರುವ ಕಬ್ಬಿಣದ ಪೈಪ್ಗಳನ್ನು ಹಿಡಿದುಕೊಂಡು ಬರುತ್ತಿದ್ದಾಗ ಅಲ್ಲಿ ಅಳವಡಿಸಿದ್ದ ವಿದ್ಯುತ್ ಮೀಟರ್ನ ಕಬ್ಬಿಣದ ನಳದ ಮೇಲೆ ಕಾಲು ಇಟ್ಟಾಗ ವಿದ್ಯುತ್ ಸ್ಪರ್ಶಿಸಿದೆ. ಚಿಕಿತ್ಸೆಗಾಗಿ ಸಿ.ಜಿ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಮುಳುಗಿ ಕಾರ್ಮಿಕ ಸಾವು
ದಾವಣಗೆರೆ: ತಾಲ್ಲೂಕಿನ ಅಣಜಿ ಕೆರೆಯಲ್ಲಿ ಮುಳುಗಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಹುಲಿಕಟ್ಟೆ ಗ್ರಾಮದ ಮಲ್ಲಿಕಾರ್ಜುನಪ್ಪ (35) ಮೃತರು. ರೈಸ್ಮಿಲ್ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಕೆಲಸದ ವಿಚಾರದಲ್ಲಿ ಪತ್ನಿಯ ಜೊತೆ ಜಗಳ ಮಾಡಿಕೊಂಡಿದ್ದರು. ಆ ಕಾರಣಕ್ಕೆ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಅವರ ತಂದೆ ಹಾಲಸಿದ್ದಪ್ಪ ಅವರು ಮಗನನ್ನು ಹುಡುಕುತ್ತಿದ್ದಾಗ ಅಣಜಿ ಕೆರೆ ಏರಿಯ ಮೇಲೆ ಬೈಕ್ ದೊರೆತಿದೆ. ಮೀನುಗಾರರು ಕೆರೆಯಿಂದ ಮೃತ ದೇಹವನ್ನು ಹೊರತೆಗೆದಿದ್ದಾರೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ವಂಚನೆ
ದಾವಣಗೆರೆ: ಎಸ್ಬಿಐ ಅಧಿಕಾರಿಗಳು ಎಂದು ಹೇಳಿದ ಅಪರಿಚಿತರು ಶಿಕ್ಷಕರೊಬ್ಬರಿಂದ ₹ 89,999 ಹಣವನ್ನು ವಂಚಿಸಿದ್ದಾರೆ.
ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ಮಂಜುನಾಥ್ ಆರ್. ವಂಚನಗೆ ಒಳಗಾದವರು. ‘ನಿಮ್ಮ ಎಸ್ಬಿಐ ಕ್ರೆಡಿಟ್ ಕಾರ್ಡ್ ಅನ್ನು ಶಾಶ್ವತವಾಗಿ ಮುಕ್ತಾಯ ಮಾಡುತ್ತೇವೆ. ಅದಕ್ಕಾಗಿ ನಿಮ್ಮ ಡೆಬಿಟ್ ಕಾರ್ಡ್ನ ಮಾಹಿತಿ ನೀಡಿ’ ಎಂದು ಅಪರಿಚಿತರು ತಿಳಿಸಿದಾಗ ಅದನ್ನು ನಂಬಿದ ಮಂಜುನಾಥ್ ಮಾಹಿತಿಯ ಜೊತೆಗೆ ಒಟಿಪಿ ಸಂಖ್ಯೆಯನ್ನು ತಿಳಿಸಿದ್ದಾರೆ. ಅಪರಿಚಿತರು ಹಂತ ಹಂತವಾಗಿ ಮಂಜುನಾಥ್ ಅವರಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.