ಲಸಿಕೆ ಹಾಕಿಸಿಕೊಂಡವರಿಗೆ ಸಸಿ ನೀಡಿದ ಗ್ರಾ.ಪಂ. ಸದಸ್ಯರು

ಸಂತೇಬೆನ್ನೂರು: ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಹಸಿರೀಕರಣದ ಹಂಬಲ ಹೊತ್ತ ಇಲ್ಲಿನ ಎರಡನೇ ವಾರ್ಡ್ ಗ್ರಾಮ ಪಂಚಾಯಿತಿ ಸದಸ್ಯರು ವಿವಿಧ ಜಾತಿಯ ಸಸಿಗಳನ್ನು ನೀಡುವ ಮೂಲಕ ಉತ್ತೇಜನ ನೀಡಿದರು.
ಇಲ್ಲಿನ ನೂತನ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಎರಡನೇ ವಾರ್ಡ್ ನಾಗರಿಕರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಲಸಿಕೆ ಪಡೆಯಲು ಬಂದ ಬಹುಪಾಲು ಮಹಿಳೆಯರು ತಮ್ಮ ಆಯ್ಕೆಯ ಸಸಿಗಳನ್ನು ಉತ್ಸಾಹದಿಂದ ತೆಗೆದುಕೊಂಡು ಹೋಗುತ್ತಿದ್ದರು. ಸುಮಾರು 400 ಸಸಿಗಳನ್ನು ಅರಣ್ಯ ಇಲಾಖೆಯಿಂದ ಪಡೆಯಲಾಗಿತ್ತು. ಈಗಾಗಲೇ ಗ್ರಾಮದ ಹಲವು ಭಾಗಗಳಲ್ಲಿ ಗಿಡ-ಮರಗಳನ್ನು ನೆಡಲಾಗಿದೆ. ಜೊತೆಯಲ್ಲಿ ಪೋಷಣೆಗೂ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಆಸೀಫ್, ಪಿ.ಆರ್.ರುದ್ರೇಶ್.
‘ಮರಗಿಡಗಳ ನಾಶದಿಂದ ಹವಾಮಾನ ವೈಪರೀತ್ಯದ ಅನುಭವಕ್ಕೆ ಬರುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಹಸಿರೀಕರಣದ ಮಹತ್ವ ಸಾರಲು ಸಸಿಗಳನ್ನು ಹಂಚಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ವಿನೂತನ ಪ್ರಯೋಗಕ್ಕೆ ಮುಂದಾದೆವು’ ಎಂದರು ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ಎಸ್.ಶಿವರಾಜ್, ಉಲ್ಲಾಸ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.