ದಾವಣಗೆರೆ: ನಗರ ಸೇರಿ ಜಿಲ್ಲೆಯ ಕೆಲವೆಡೆ ಶನಿವಾರ ಉತ್ತಮ ಮಳೆಯಾಯಿತು. ಹಲವು ದಿನಗಳಿಂದ ತುಂತುರು ಮಳೆ ಕಂಡಿದ್ದ ನಗರದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಆಗಾಗ ಸುರಿದ ಮಳೆ ತಂಪೆರೆಯಿತು.
ಬೆಳಿಗ್ಗೆಯಿಂದ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಸಂಜೆ ಹೊತ್ತಿಗೆ ಉತ್ತಮವಾಗಿ ಸುರಿಯಿತು. ಸಂಜೆ ವೇಳೆಗೆ 20 ನಿಮಿಷಗಳಿಗೂ ಹೆಚ್ಚು ಕಾಲ ಉತ್ತಮ ಮಳೆಯಾಯಿತು. ಮಳೆಯಿಂದ ಚರಂಡಿ ಇಲ್ಲದ ರಸ್ತೆಗಳಲ್ಲಿ ಕೊಂಚ ನೀರು ನಿಂತಿತ್ತು. ಪಿ.ಬಿ. ರಸ್ತೆ, ಜಯದೇವ ಸರ್ಕಲ್, ವಿನೋಬನಗರ, ನಿಟುವಳ್ಳಿ ಸೇರಿ ನಗರದ ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು.
ವಾಹನ ಸವಾರರು ಮಳೆಯಲ್ಲೇ ಸಾಗುತ್ತಿದ್ದುದು ಕಂಡುಬಂತು. ಜಿಲ್ಲೆಯ ಚನ್ನಗಿರಿ ತಾಲ್ಲೂಕು, ಮಲೇಬೆನ್ನೂರು, ತ್ಯಾವಣಿಗೆ, ಸಾಸ್ವೆಹಳ್ಳಿ ಸೇರಿ ಕೆಲವೆಡೆ ತುಂತುರು ಮಳೆಯಾಯಿತು. ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಚನ್ನಗಿರಿ ತಾಲ್ಲೂಕುಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ.