ಹರಿಹರ:ಇಂದಿರಾ ನಗರದ ಲಸಿಕಾ ಕೇಂದ್ರದಲ್ಲಿ ಸೋಮವಾರಮಾಹಿತಿ ಹಾಗೂ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಮೊದಲ ಹಾಗೂ ಎರಡನೇ ಹಂತದ ಕೋವಿಡ್ ಲಸಿಕೆ ಪಡೆಯಲು ಬಂದ ಸಾರ್ವಜನಿಕರು ಲಸಿಕಾ ಕೇಂದ್ರಕ್ಕೆ ಮುತ್ತಿಗೆ ಹಾಕಿದರು.
ಎರಡನೇ ಹಂತದ ಲಸಿಕೆ ಪಡೆಯಲು ಲಸಿಕಾ ಕೇಂದ್ರದ ಬಳಿ ಬೆಳಿಗ್ಗೆ 5ರಿಂದ ಜಮಾಯಿಸಿದ್ದರು. ಆದರೆ, ಕೋವ್ಯಾಕ್ಸಿನ್ ದಾಸ್ತಾನು ಇಲ್ಲದ ಕಾರಣ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಂತೆ ಆಕ್ರೋಶ ಗೊಂಡ ಜನರು ತಾಲ್ಲೂಕು ಆಡಳಿತ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಎಲ್. ರಮೇಶ್, ‘ಶುಕ್ರವಾರ ಲಸಿಕೆ ಪಡೆಯಲು ಹೋದಾಗ, ಸೋಮವಾರ ಲಸಿಕೆ ನೀಡಲಾಗುವುದು ಎಂದು ಕೂಪನ್ಗಳನ್ನು ವಿತರಿಸಿದ್ದರು. ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ. ಆದರೆ, ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಯಾವುದೇ ಮಾಹಿತಿ ನೀಡದೇ ಸತಾಯಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ರಿಕ್ತ ಜನರ ಗುಂಪು ಲಸಿಕೆ ಕೇಂದ್ರಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಎಲ್. ಹನುಮನಾಯಕ್, ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ಹಾಗೂ ಪೊಲೀಸ್ ಸಿಬ್ಬಂದಿ ಬಂದು, ಕೋವ್ಯಾಕ್ಸಿನ್ ದಾಸ್ತಾನು ಬಂದ ಕೂಡಲೇ ನೀಡಲಾಗುವುದು ಎಂದು ಮನವೊಲಿಸಿದರು.