ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಮಾರ್ಗಗಳತ್ತ ಚಿಂತನೆ ಇರಲಿ

ಪಿಟಿಐ ಸುದ್ದಿಸಂಸ್ಥೆಯ ವಿಶೇಷ ವರದಿಗಾರ್ತಿ ಎ. ಲಕ್ಷ್ಮೀದೇವಿ
Last Updated 26 ಫೆಬ್ರುವರಿ 2021, 2:18 IST
ಅಕ್ಷರ ಗಾತ್ರ

ದಾವಣಗೆರೆ:ಪತ್ರಕರ್ತರಿಗೆ ಪ್ರಸ್ತುತ ಸಂದರ್ಭದಲ್ಲಿ ವೃತ್ತಿಯಲ್ಲಿ ಹಲವಾರು ಸವಾಲುಗಳಿವೆ. ಅವುಗಳನ್ನು ಹಿಮ್ಮೆಟ್ಟಿಸಿ, ತಮ್ಮತನ ಗುರುತಿಸಿಕೊಳ್ಳಲೂ ಅವಕಾಶಗಳಿವೆ. ಭವಿಷ್ಯದಲ್ಲಿ ಯಾವುದೇ ಮಾಧ್ಯಮ ಅನಿವಾರ್ಯವಲ್ಲ ಎಂಬುದನ್ನು ಅರ್ಥಮಾಡಿಕೊಂಡು ಪರ್ಯಾಯ ಮಾರ್ಗಗಳತ್ತ ಯೋಚನೆ ಮಾಡಬೇಕು ಎಂದು ಪಿಟಿಐ ಸುದ್ದಿ ಸಂಸ್ಥೆಯ ನವದೆಹಲಿಯ ವಿಶೇಷ ವರದಿಗಾರ್ತಿ ಎ. ಲಕ್ಷ್ಮೀದೇವಿ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂಟರ್‌ನೆಟ್ ಇಲ್ಲದ ಸನ್ನಿವೇಶದಲ್ಲೂ ಕೆಲಸ ಮಾಡುವ, ನೆಲೆ ಕಂಡುಕೊಳ್ಳುವ ಮಾರ್ಗಗಳನ್ನು ಅರಿಯುವುದು ಅತ್ಯವಶ್ಯ. ಪೈಪೋಟಿ ಮಾಧ್ಯಮ ಕ್ಷೇತ್ರಕ್ಕೂ ಹೊರತಾಗಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ವೃತ್ತಿಪರ ಕೌಶಲ, ಅಗತ್ಯವಿರುವ ಜ್ಞಾನದ ಅರಿವು ಅಗತ್ಯ ಎಂದು ಕಿವಿಮಾತು ಹೇಳಿದರು.

ಪತ್ರಿಕಾ ವೃತ್ತಿಯಲ್ಲಿ ಮೌಲ್ಯಗಳಿಗೆ ಹೆಚ್ಚು ಮನ್ನಣೆ ಇದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತು ಸುದ್ದಿ ಮಾಡುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ವೃತ್ತಿಯ ಒಳ್ಳೆಯ ಮೌಲ್ಯಗಳನ್ನು ತಿಳಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಯಾವುದೇ ಮಾಧ್ಯಮವೂ ಜನಪರವಾಗಿಲ್ಲ. ಡಿಜಿಟಲ್ ಮಾಧ್ಯಮ ಹೆಚ್ಚು ಪ್ರಚಲಿತದಲ್ಲಿದೆ. ಅದರಿಂದ ಆಗುವ ಲಾಭದಷ್ಟೇ ಅಪಾಯವೂ ಇದೆ ಎಂದರು.

ತಂತ್ರಜ್ಞಾನದ ದೈತ್ಯ ಶಕ್ತಿಗಳು ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದು, ಅವೂ ಮತ್ತೊಂದು ರೀತಿಯ ಈಸ್ಟ್ ಇಂಡಿಯ ಕಂಪನಿ ರೀತಿಯಲ್ಲಿ ದೇಶವನ್ನು ಆಳಬಲ್ಲವು ಎಂಬುದನ್ನು ಆಲೋಚಿಸಬೇಕು. ಇಲ್ಲವಾದರೆ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ‘ಪತ್ರಕರ್ತರು ವೃತ್ತಿ ಗೌರವದ ಜೊತೆ ಪತ್ರಿಕಾ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ವೃತ್ತಿಪರವಾಗಿ ಗುರುತಿಸಿಕೊಳ್ಳಲು ಸಾಧ್ಯ.ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶಗಳಿವೆ. ಅವರು ತಮ್ಮ ಸಮಸ್ಯೆಗಳನ್ನೇ ಸವಾಲು ಎಂದುಕೊಂಡು ವೃತ್ತಿಯಲ್ಲಿ ಬೆಳೆಯಬೇಕು’ ಎಂದು ಸಲಹೆ ನೀಡಿದರು.

ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ‘ಭಾಷೆ, ಅಧ್ಯಯನಶೀಲತೆ ಮತ್ತು ವೃತ್ತಿಪರತೆ ಯಾವುದೇ ಕೆಲಸಕ್ಕೂ ಮುಖ್ಯವಾಗಿ ಬೇಕು. ಇದಕ್ಕೆ ಪತ್ರಿಕೋದ್ಯಮ ಕ್ಷೇತ್ರ ಹೊರತಾಗಿಲ್ಲ. ಓದುವ, ಬರೆಯುವ ಹವ್ಯಾಸ ರೂಢಿಸಿಕೊಂಡು, ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ವೃತ್ತಿಯಲ್ಲಿ ಬೆಳೆಯಬೇಕು’ ಎಂದರು.

ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ,ಶಿಕ್ಷಣ ನಿಕಾಯದ ಡೀನ್ ಡಾ.ಕೆ. ವೆಂಕಟೇಶ್ ಮಾತನಾಡಿದರು.

ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಶಿವಕುಮಾರ ಕಣಸೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಎಂ. ವಿನಯ್, ಡಾ. ಚಂದ್ರಕಲಾ, ವೆಂಕಟೇಶ್, ಲಾವಣ್ಯ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT