ದಾವಣಗೆರೆ: ಶೇಖರಪ್ಪ ನಗರದ ಲಾಕ್ಡೌನ್ ಸಂತ್ರಸ್ತರಿಗೆ ಭಾನುವಾರ ಆಹಾರಧಾನ್ಯದ ಕಿಟ್ ವಿತರಣೆ ಸಂದರ್ಭದಲ್ಲಿ, ಕಿಟ್ ಕೇಳಿದ ವ್ಯಕ್ತಿಯೊಬ್ಬರ ಮೇಲೆ ಒಂದು ಗುಂಪು ಅಮಾನುಷವಾಗಿ ಹಲ್ಲೆ ನಡೆಸಿದೆ.
19ನೇ ವಾರ್ಡ್ ವ್ಯಾಪ್ತಿಯ ಶೇಖರಪ್ಪ ನಗರದ ಶ್ರೀಕಾಂತ್ ಹಲ್ಲೆಗೊಳಗಾದ ವ್ಯಕ್ತಿ.
ಬೇಕಾದವರಿಗೆ ಮಾತ್ರವೇ ಕಿಟ್ ನೀಡುತ್ತಿದ್ದನ್ನು ಅಲ್ಲಿನ ಯುವಕ ಶ್ರೀಕಾಂತ್ ಪ್ರಶ್ನಿಸಿದ್ದಾರೆ. ‘ನಿರ್ದಿಷ್ಟ ಕೋಮಿಗೆ ಮಾತ್ರವೇ ಕಿಟ್ ನೀಡುತ್ತೇವೆ. ಕಾಂಗ್ರೆಸ್ಗೆ ಮತ ಹಾಕಿದವರಿಗೆ ಮಾತ್ರವೇ ಕಿಟ್’ ಎಂಬ ಉತ್ತರ ಬಂದಿದೆ. ‘ಹಾಗಾದರೆ ನಮ್ಮ ಬಡಾವಣೆಯಲ್ಲಿ ಕಿಟ್ ಹಂಚಬೇಡಿ’ ಎಂದು ಶ್ರೀಕಾಂತ್ ಹೇಳಿದಾಗ ಆತನ ಕಾಲಿನ ಮೂಳೆ ಮುರಿಯುವಂತೆ ಹಲ್ಲೆ ನಡೆಸಲಾಗಿದೆ.
‘ಬೇಕಾದವರಿಗೆ ಅಷ್ಟೇ ಕೊಡುತ್ತಿದ್ದೀರಿ, ನಮಗೂ ಕೊಡಿ ಎಂದಿದ್ದಕ್ಕೆ ಜಾತಿನಿಂದನೆ ಮಾಡಿದರು. ಒಂದು ಕಾಲು ತಿಂಗಳ ಹಿಂದೆ ಪೆಟ್ಟಾಗಿತ್ತು. ಈಗ ಮತ್ತೊಂದು ಕಾಲಿಗೆ ಪೆಟ್ಟಾಗಿದೆ. ಈಗ ನಡೆಯಲು ಆಗುತ್ತಿಲ್ಲ’ ಎಂದು ಶ್ರೀಕಾಂತ್ ದೂರಿದರು.
ಘಟನೆ ಸಂಬಂಧ, ನಾಲ್ವರು ಆರೋಪಿಗಳ ವಿರುದ್ಧ ಆರ್ಎಂಸಿ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ ಎಂದು ನಗರ ಡಿವೈಎಸ್ಪಿ ನಾಗೇಶ್ ಐತಾಳ್ ತಿಳಿಸಿದ್ದಾರೆ.