ದಾವಣಗೆರೆ: ಪ್ರಧಾನಮಂತ್ರಿ ಆವಾಜ್ ಯೋಜನೆ– ಸರ್ವರಿಗೂ ಸೂರು ಸ್ಕೀಂನಡಿ ದಾವಣಗೆರೆ ನಗರದ 11 ಕೊಳೆಗೇರಿ ನಿವಾಸಿಗಳಿಗೆ 2,120 ಮನೆಗಳ ನಿರ್ಮಾಣಕ್ಕೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅನುಮೋದನೆ ನೀಡಿದೆ.
ಶೇಖರಪ್ಪ ನಗರ, ಹಳೇಚಾಕನಹಳ್ಳಿ, ಬಂಬೂಬಜಾರ್, ಕೆ.ಜಿ. ಕಲ್ಲಪ್ಪ ರೈಸ್ಮಿಲ್ ಹಿಂಭಾಗ (ಎಚ್.ಕೆ.ಆರ್.ನಗರ), ಕಾರ್ಲ್ಮಾಕ್ಸ್ ನಗರ, ಶ್ರೀರಾಮನಗರ, ಕುಂದವಾಡ ಎ.ಕೆ. ಕಾಲೋನಿ, ಯರಗುಂಟಿ ಎ.ಕೆ. ಕಾಲೊನಿ, ಸಿದ್ದರಾಮೇಶ್ವರ ನಗರ, ಇಂದಿರಾನಗರ ಎ.ಕೆ. ಕಾಲೊನಿ, ಬಸಾಪುರ ಹಳ್ಳದದಂಡೆ ಎಕೆ ಕಾಲೊನಿಗಳಲ್ಲಿ ಮನೆಗಳ ನಿರ್ಮಾಣಕ್ಕೆ 2014–15ನೇ ಸಾಲಿನಲ್ಲಿ ಕ್ರಿಯಾ ಯೋಜನೆ ತಯಾರಿಸಿದೆ.
‘ಕಚ್ಚಾ ಮನೆ ಇರುವವರಿಗೆ ಮತ್ತು ಆ ಬಡಾವಣೆಯಲ್ಲಿ ನಿವೇಶನ ಹೊಂದಿರುವವರಿಗೆ ಮಾತ್ರ ಮನೆ ನಿರ್ಮಾಣ ಮಾಡುತ್ತೇವೆ. ನಿವೇಶನ ಇಲ್ಲದವರಿಗೆ ನಿವೇಶನ ಕೊಡಲು ಬರುವುದಿಲ್ಲ’ ಎನ್ನುತ್ತಾರೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ದಾವಣಗೆರೆ ಉಪವಿಭಾಗದ ಸಹಾಯಕ ಎಂಜಿನಿಯರ್ ಎಸ್.ಎಲ್. ಆನಂದಪ್ಪ.
‘ಫಲಾನುಭವಿಗಳ ಬೇಡಿಕೆ ಏನಿದೆ ಎಂಬುದನ್ನು ಸಮೀಕ್ಷೆ ಮಾಡಿ ಕಚ್ಚಾ, ಸೆಮಿ ಪಕ್ಕಾ ಹಾಗೂ ಪಕ್ಕಾ ಮನೆಗಳನ್ನು ಮೌಲ್ಯಮಾಪನ ಮಾಡಲಾಗುವುದು. ಇವುಗಳಲ್ಲಿ ಜಾತಿವಾರು, ಪ್ರದೇಶಾವಾರು ವಿಂಗಡಿಸಿ ಡಿಪಿಆರ್ ತಯಾರಿಸಿ, ಸರ್ಕಾರದಿಂದ ಅನುಮೋದನೆ ಪಡೆದು ನಾವೇ ಕೆಲಸ ನಿರ್ವಹಿಸಬೇಕು. ಆದರೆ ಅನುಮೋದನೆಯಾಗಿ ಬಂದಿರುವ ಡಿಪಿಆರ್ ಅನ್ನು ಪಡೆದು ದಾವಣಗೆರೆ ಮಹಾ ನಗರಪಾಲಿಕೆ ಕೊಳೆಗೇರಿಗಳಲ್ಲಿ ಮನೆಗಳ ನಿರ್ಮಾಣ ಮಾಡುತ್ತಿದೆ’ ಎಂದು ವಿವರ ನೀಡಿದರು.
‘ನಮ್ಮ ವ್ಯಾಪ್ತಿಗೆ ಹಾವೇರಿ, ದಾವಣಗೆರೆ, ಚಿತ್ರದುರ್ಗ ವ್ಯಾಪ್ತಿಗೆ ಬರಲಿದ್ದು, 2016–17ನೇ ಸಾಲಿನಲ್ಲಿ ಹರಪನಹಳ್ಳಿ, ಹರಿಹರ, ಚನ್ನಗಿರಿ ಮನೆಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದು, ಇವುಗಳು ಮುಗಿಯುತ್ತಾ ಬಂದಿವೆ. ಕೆಲವೇ ದಿನಗಳಲ್ಲಿ ಶೇ 60ರಷ್ಟು ಮನೆಗಳನ್ನು ಹಸ್ತಾಂತರ ಮಾಡುತ್ತೇವೆ’ ಎಂದರು.
‘2018–19ನೇ ಸಾಲಿನಲ್ಲಿ ಜಿಲ್ಲೆಯ 28 ಕೊಳೆಗೇರಿಗಳಿಗೆ 3,021 ಮನೆಗಳಿಗೆ ಪ್ರಸ್ತಾವ ಸಲ್ಲಿಸಿದ್ದು, ಟೆಂಡರ್ ಕರೆಯುವ ನಿರೀಕ್ಷೆಯಲ್ಲಿ ಇದ್ದೇವೆ. ಕಾನೂನು ಪ್ರಕಾರವೇ ಕೆಲಸ ಮಾಡುತ್ತೇವೆ’ ಎಂದು ಹೇಳುತ್ತಾರೆ.
ಯಾರದು ಎಷ್ಟು ಪಾಲು?
ಒಂದು ಮನೆಯ ನಿರ್ಮಾಣಕ್ಕೆ ₹ 4.90 ಲಕ್ಷ ವೆಚ್ಚವಾಗಲಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ಪಾಲು ₹1.50 ಲಕ್ಷ, ರಾಜ್ಯದ ಪಾಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ₹ 2ಲಕ್ಷ ಇತರೆ ವರ್ಗದವರಿಗೆ ₹1.20 ಲಕ್ಷ ಇರುತ್ತದೆ. ಫಲಾನುಭವಿಗಳು ಇತರೆ ವರ್ಗದವರಾದರೆ ಶೇ 15ರಷ್ಟು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು ಶೇ 10ರಷ್ಟು ವಂತಿಗೆ ನೀಡಬೇಕು. ಇದರ ಜೊತೆಗೆ ಸಿಂಡಿಕೇಟ್ ಬ್ಯಾಂಕ್ನಲ್ಲಿ ₹1.40 ಲಕ್ಷ ಸಾಲ ತೆಗೆದು ಹಣ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ₹ 91 ಸಾವಿರವನ್ನು ಸಾಲ ತೆಗೆದು ನೀಡಬೇಕು’ ಎಂದು ವಿವರಿಸುತ್ತಾರೆ ಆನಂದಪ್ಪ.
*ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕೊಳಗೇರಿ ಮಂಡಳಿಯಿಂದ ಮನೆ ನಿರ್ಮಿಸಲಾಗುತ್ತಿದೆ. ಆದರೆ ದಾವಣಗೆರೆಯಲ್ಲಿ ಮಾತ್ರ ಮಹಾನಗರ ಪಾಲಿಕೆ ನಿರ್ಮಾಣ ಮಾಡುತ್ತಿದೆ
-ಎಸ್.ಎಲ್.ಆನಂದಪ್ಪ.
ಸಹಾಯಕ ಎಂಜಿನಿಯರ್, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ದಾವಣಗೆರೆ ಉಪವಿಭಾಗ
ಹಸ್ತಾಂತರಕ್ಕೆ ಸಿದ್ಧವಿರುವ ಮನೆಗಳು
ತಾಲ್ಲೂಕು ಮನೆ
ಹರಪನಹಳ್ಳಿ 253
ಹರಿಹರ 801
ಚನ್ನಗಿರಿ 295
ಜಗಳೂರು 99
ಪ್ರಸ್ತಾವ ಸಲ್ಲಿಸಿರುವುದು
ನಗರ- ಕೊಳೆಗೇರಿಗಳ ಸಂಖ್ಯೆ- ಮನೆಗಳ ಸಂಖ್ಯೆ
ದಾವಣಗೆರೆ ಉತ್ತರ 5 - 828
ದಾವಣಗೆರೆ ದಕ್ಷಿಣ 6 -895
ದಾವಣಗೆರೆ ದಕ್ಷಿಣ 2 -947
ಹೊನ್ನಾಳಿ 4 -351
ಚನ್ನಗಿರಿ 8 -1002
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.