ದಾವಣಗೆರೆ: ‘ರಮೇಶ್ ಜಾರಕಿಹೊಳಿ ಹೇಳಿರುವ ಸಿಡಿ ಬ್ಲ್ಯಾಕ್ಮೇಲ್ ವಿಚಾರ ನನಗೆ ಗೊತ್ತಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆ ನಗರದ ಶಾಮನೂರಿನ ಎ.ಕೆ. ಕಾಲೊನಿಯಲ್ಲಿ ಮಂಗಳವಾರ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.
ಗೊತ್ತಿಲ್ಲದ ವಿಚಾರಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಇನ್ನೂ ಪೂರ್ತಿಯಾಗಿಲ್ಲ. ಸರ್ವಿಸ್ ರಸ್ತೆಯಾಗದೇ ಟೋಲ್ ಸಂಗ್ರಹಿಸುಂತಿಲ್ಲ. ಬೈಪಾಸ್ ಆಗಿಲ್ಲ. ಅಂಡರ್ಪಾಸ್ ನಿರ್ಮಾಣ ಮಾಡಿಲ್ಲ. ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದಿವೆ. ಚುನಾವಣೆ ಹತ್ತಿರ ಬಂತೆಂದು ತರಾರುತಿಯಲ್ಲಿ ಪ್ರಧಾನಿಯವರನ್ನು ಕರೆಸಿ ಉದ್ಘಾಟನೆ ಮಾಡಲಾಗಿದೆ ಎಂದು ಆರೋಪಿಸಿದರು.
‘ಬೆಂಗಳೂರು ಮೈಸೂರು ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ನಾವು. ಹತ್ತು ಪಥದ ರಸ್ತೆ ಮಾಡಬೇಕೆಂದು ಅನುಮೋದನೆ ಮಾಡಿದ್ದು ನಾವು. ನಾವು ಮಾಡಿದ ಕೆಲಸವನ್ನು ಅವರು ಉದ್ಘಾಟ ಕೆಲಸವನ್ನು ಅವರು ಉ ಕೆಲಸಕ್ಕೆ ಅವರು ಬಂದು ಉದ್ಘಾಟನೆ ಮಾಡಿದ್ದಾರೆ’ ಎಂದು ಟೀಕಿಸಿದರು.
ಶಾಮನೂರು ಆಂಜನೇಯ ದೇವಸ್ಥಾನ, ಈಶ್ವರ ದೇವಸ್ಥಾನ, ದುರ್ಗಮ್ಮ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
200 ಯುನಿಟ್ ವಿದ್ಯುತ್ ಉಚಿತ, ಮನೆ ಯಜಮಾನಿಗೆ ತಿಂಗಳಿಗೆ ₹ 2000, 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿ ಕಾರ್ಡ್ಗಳನ್ನು ಮನೆಗಳಿಗೆ ಹಂಚಿದರು. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಇದೆಲ್ಲ ನಿಮಗೆ ನಾವು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಜಮೀರ್ ಅಹ್ಮದ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸಹಿತ ಅನೇಕರು ಇದ್ದರು.