ದಾವಣಗೆರೆ: ‘ಲಿಂಗಾಯತ ಹಾಗೂ ಒಕ್ಕಲಿಗರಿಗೆ ಮೀಸಲಾತಿ ಸಂಬಂಧ ಸರ್ಕಾರದ ಮಟ್ಟದಲ್ಲೇ ಹತ್ತಾರು ಗೊಂದಲಗಳಿವೆ. ಇನ್ನೂ ವಿವರ ಸಿಕ್ಕಿಲ್ಲ. ಇದು ಬಿಜೆಪಿಯ ಚುನಾವಣಾ ಗಿಮಿಕ್‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಈ ಸಮುದಾಯಗಳಿಗೆ ಆರ್ಥಿಕವಾಗಿ ಹಿಂದುಳಿದ (ಇಡಬ್ಲ್ಯೂಎಸ್) ವಿಭಾಗದಲ್ಲಿ ಮೀಸಲಾತಿ ನೀಡಲಿದೆಯೋ ಅಥವಾ ಸಾಮಾನ್ಯ ವರ್ಗದಲ್ಲಿನ ಪಾಲನ್ನು ನೀಡಲಿದೆಯೋ ಎಂಬುದು ಪ್ರಶ್ನೆಯಾಗಿ ಉಳಿದಿದೆ’ಎಂದರು.
‘ಮಹದಾಯಿ ವಿಸ್ತೃತ ಯೋಜನಾ ವರದಿ (ಡಿಪಿಆರ್)ಗೆ ಕೇಂದ್ರ ಸರ್ಕಾರ ಈಗ ಅನುಮೋದನೆ ನೀಡಿರುವುದೂ ಗಿಮಿಕ್. ಎರಡು ವರ್ಷಗಳಿಂದ ಆಗದ ಕೆಲಸವನ್ನು ಬಿಜೆಪಿಯವರು ಈಗ ಮಾಡಿದ್ದಾರೆ. ಮೊದಲೇ ಏಕೆ ಅನುಮೋದನೆ ನೀಡಲಿಲ್ಲ’ ಎಂದು ಅವರು ಪ್ರಶ್ನಿಸಿದರು.
‘ರಾಜ್ಯಕ್ಕೆ ಅಮಿತ್ ಶಾ ಬರಲಿಅಥವಾ ಪ್ರಧಾನಿ ಮೋದಿಯೇ ಬರಲಿ. ಯಾರೇ ಬಂದರೂ ಕಾಂಗ್ರೆಸ್ಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಅಮಿತ್ ಶಾ ಮಾಯಾವಿಯಲ್ಲ. ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶದ ಚುನಾವಣೆ ವೇಳೆ ಅಲ್ಲಿಯೇ ಠಿಕಾಣಿ ಹೂಡಿದ್ದರೂ ಫಲಿತಾಂಶ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.
ಬಳಿಕ ನಡೆದ ಸಾಮೂಹಿಕ ವಿವಾಹದಲ್ಲಿ ಮಾತನಾಡಿದ ಅವರು, ‘ನಮಗಾಗಿ ಧರ್ಮವಿದೆ. ಧರ್ಮಕ್ಕಾಗಿ ನಾವು ಅಲ್ಲ. ಅನೇಕ ಧರ್ಮಗಳು ದೇಶದಲ್ಲಿ ಇವೆ. ಯಾವುದೇ ಧರ್ಮಕ್ಕೆ ಸೇರಿದರೂ ನಾವು ಮನುಷ್ಯರು. ಎಲ್ಲರ ಮೈಯಲ್ಲಿ ಹರಿಯುತ್ತಿರುವ ರಕ್ತ ಒಂದೇ ಎಂಬುದು ತಿಳಿದಿರಬೇಕು’ ಎಂದರು.