ಜಗಳೂರು: ತಾಲ್ಲೂಕಿನ ಗಡಿಮಾಕುಂಟೆ ಗ್ರಾಮಕ್ಕೆ ಶನಿವಾರ ನುಗ್ಗಿದ ಕರಡಿಯನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ದಿನವಿಡೀ ಹರಸಾಹಸಪಟ್ಟು ಕೊನೆಗೂ ಸೆರೆ ಹಿಡಿದರು.
ಬಲೆಗೆ ಬಿದ್ದರೂ ದಾರವನ್ನು ಕಡಿದು ತುಂಡರಿಸಿ ಅರಣ್ಯ ಸಿಬ್ಬಂದಿ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿತು.
ಗ್ರಾಮದ ಉಪ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಅಡಿಕೆ ತೋಟದಲ್ಲಿ ಅವಿತಿದ್ದ ಹೆಣ್ಣು ಕರಡಿಯನ್ನು ಕಂಡ ಗ್ರಾಮಸ್ಥರು ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಅಕ್ಕಪಕ್ಕದ ಗ್ರಾಮಸ್ಥರು ಭಾರಿ ಸಂಖ್ಯೆಯಲ್ಲಿ ಬಂದು ಸೇರಿದರು. ವಿಚಲಿತಗೊಂಡ ಕರಡಿ ಜನರ ಮೇಲೆ ದಾಳಿ ನಡೆಸಿತು.
ಜನರ ಕೂಗಾಟ ಹಾಗೂ ಗದ್ದಲ ಹೆಚ್ಚಾಗುತ್ತಿದ್ದಂತೆ ತೋಟದ ಒಳಗಿನ ಮರ ಏರಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆಗಳನ್ನು ಹಿಡಿದು ಕರಡಿ ಸೆರೆ ಹಿಡಿದರು. ಆದರೂ ಬಲೆಯ ದಾರವನ್ನು ಕಡಿದು ತುಂಡರಿಸಿ ಅರಣ್ಯ ಸಿಬ್ಬಂದಿ ನಾಗರಾಜ ಹಾಗೂ ರಂಗಪ್ಪ ಮೇಲೆ ದಾಳಿ ನಡೆಸಿತು. ಕೊನೆಗೆ ಎಲ್ಲಾ ಕಡೆಯಿಂದ ಬಲೆ ಹಾಕಿ ಕರಡಿಯನ್ನು ಹಿಡಿದು ಬೋನಿಗೆ ಹಾಕಲಾಯಿತು.
ದಾವಣಗೆರೆ ತಾಲ್ಲೂಕಿನ ಆನಗೋಡು ಪ್ರಾಣಿ ಸಂಗ್ರಹಾಲಯಕ್ಕೆ ಕರಡಿಯನ್ನು ಸಾಗಿಸಲಾಯಿತು. ವಲಯ ಅರಣ್ಯಾಧಿಕಾರಿ ಪ್ರಕಾಶ್, ಸಿಬ್ಬಂದಿ ನಾಗರಾಜ್, ಶಿವಾರೆಡ್ಡಿ, ಪಿಎಸ್ಐ ಇಮ್ರಾನ್ ಬೇಗ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.