ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಸಿಕ್ಕರೆ ನೀರಾವರಿ ಯೋಜನೆ ಕಾರ್ಯಗತ

ಜನತಾ ಜಲಧಾರೆ ಯಾತ್ರೆಯಲ್ಲಿ ಜೆಡಿಎಸ್ ಉತ್ತರ ಅಧ್ಯಕ್ಷ ಬಾತಿ ಶಂಕರ್ ವಿಶ್ವಾಸ
Last Updated 9 ಮೇ 2022, 2:40 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ ಎಂದು ಜೆಡಿಎಸ್ ಉತ್ತರ ಅಧ್ಯಕ್ಷ ಬಾತಿ ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಯಾತ್ರೆಯಲ್ಲಿ ನಗರದ ಜಯದೇವ ವೃತ್ತದಲ್ಲಿ ಅವರು ಭಾನುವಾರ ಮಾತನಾಡಿದರು.

ಕನಿಷ್ಠ 123 ಸ್ಥಾನ ಗೆಲ್ಲುವ ಸಂಕಲ್ಪವನ್ನು ಮಾಡಲಾಗಿದೆ. ಇದು ಸಾಕಾರಗೊಂಡರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ನೀರಾವರಿ ಕಲ್ಪಿಸಲು ಶ್ರಮಿಸಲಿದೆ. ರೈತರ ಬದುಕು ಇದರಿಂದ ಹಸನುಗೊಳ್ಳಲಿದೆ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಅಮಾನುಲ್ಲಾ ಖಾನ್, ‘ದಾವಣಗೆರೆ ಉತ್ತರ, ದಕ್ಷಿಣ, ಹರಿಹರದಲ್ಲಿ ಜೆಡಿಎಸ್‌ ಜಯಗಳಿಸಲಿದೆ. ಉಳಿದ ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್‌ಗೆ ಹೆಚ್ಚು ಅವಕಾಶಗಳಿವೆ. ಜನರು ಕಾಂಗ್ರೆಸ್,
ಬಿಜೆಪಿಯಿಂದ ಭ್ರಮನಿರಸನ ಗೊಂಡಿದ್ದಾರೆ. ದೆಹಲಿ ಹೈಕಮಾಂಡ್ ಸಂಸ್ಕೃತಿಯಿಂದ ಬೇಸತ್ತಿರುವ ಪ್ರಾದೇಶಿಕ ಪಕ್ಷ ಜೆಡಿಎಸ್‍ನತ್ತ ಒಲವು ತೋರುತ್ತಿದ್ದಾರೆ’ ಎಂದು ತಿಳಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್, ‘ಜಿಲ್ಲಾ ಕೇಂದ್ರಕ್ಕೆ ಸಮೀಪವೇ ಜೀವನದಿ ತುಂಗಭದ್ರಾ ಹರಿಯುತ್ತದೆ. ಜಿಲ್ಲೆಯ ಎಲ್ಲ ಭಾಗಕ್ಕೂ ಭದ್ರಾ ನಾಲೆಗಳು ಸಾಗುತ್ತವೆ. ಇಷ್ಟಾದರೂ ಪಾಲಿಕೆ ವ್ಯಾಪ್ತಿಯಲ್ಲಿ 8 ದಿನಕ್ಕೊಮ್ಮೆ ನೀರು ಪೂರೈಸುವ ಕೆಲಸ ಪಾಲಿಕೆ ಮಾಡುತ್ತಿದೆ. ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‍ ವಿಫಲವಾಗಿವೆ. ಸೂಳೆಕೆರೆಗೆ ಯಾವುದೇ ನೀರಾವರಿ ಯೋಜನೆ ರೂಪಿಸಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಎಲ್ಲ ನೀರಾವರಿ ಯೋಜನೆಗಳು ಕಾರ್ಯಗತಗೊಳ್ಳಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಗಣೇಶ ಟಿ.ದಾಸಕರಿಯಪ್ಪ, ಯು.ಎಂ. ಮನ್ಸೂರ್ ಅಲಿ, ರೇಖಾ, ಸಿಂಧು, ಗಾಯತ್ರಿ, ಗೀತಾ ವೆಂಕಟೇಶ, ರೇಖಾ ಗಾಯತ್ರಿ, ಗೀತಾ, ಸುಧಾ, ಪರ್ವೀನ್ ಬಾನು, ಧನಂಜಯ, ದಾದಾಪೀರ್, ಶಹನವಾಜ್ ಖಾನ್, ಫಾರೂಕ್ ಖಾನ್, ವಾಜಿದ್, ಜಮೀರ್ ಅಹಮ್ಮದ್, ರಾಜಾಸಾಬ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT