ಜಗಳೂರು: ತಾಲ್ಲೂಕಿನ ಗಡಿಗ್ರಾಮ ಅಣಬೂರು ಸಮೀಪದ ಕಾನಾಮಡುಗು ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಶರಣಬಸವೇಶ್ವರರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ಪೂಜಾವಿಧಿ ವಿಧಾನಗಳೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥ ಸಾಗುತ್ತಿದಂತೆ ಭಕ್ತರು ಜಯಘೋಷ ಹಾಕಿ, ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಧರ್ಮಾಧಿಕಾರಿ ಐಮಡಿ ಶರಣಾರ್ಯರು, ಚನ್ನಗಿರಿಯ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಸ್ಟೂರಿನ ಓಂಕಾರೇಶ್ವರ ಮಠದ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಯಿತು.
ರಥದ ಮುಕ್ತಿಪಠವನ್ನು ₹ 1.25 ಲಕ್ಷಕ್ಕೆ ಜುಮ್ಮೊಬ್ಬನಹಳ್ಳಿ ಜಿ. ಒಬಣ್ಣ ಹರಾಜಿನಲ್ಲಿ ಪಡೆದುಕೊಂಡರು.
ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಾರ್ತಿಕ ಮಾಸದಲ್ಲಿ ರಥೋತ್ಸವ ನಡೆಯವುದು ಇಲ್ಲಿನ ವಿಶೇಷವಾಗಿದ್ದು, ರಥೋತ್ಸವಕ್ಕೂ ಮುನ್ನ ಮಠದ ಆವರಣದಲ್ಲಿ ಆಯೋಜಿಸಿದ್ದ ಸರ್ವ ಧರ್ಮ ಸಾಮೂಹಿಕ ಮದುವೆಯಲ್ಲಿ ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು. ರಕ್ತದಾನ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು.