ಮಲೇಬೆನ್ನೂರು: ಸಮೀಪದ ಕುಂಬಳೂರಿನ ಹನುಮಂತ ದೇವರ ಮುಳ್ಳುಗದ್ದುಗೆ ಉತ್ಸವದಲ್ಲಿ ಭಾನುವಾರ ಭಕ್ತರು ಕಾರೆಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು.
ಪೂಜಾವಿಧಿಗಳ ನಂತರ ಹನುಮಂತ ದೇವರ ಉತ್ಸವಮೂರ್ತಿ, ಹರಕೆ ಹೊತ್ತು ಭೂತದ ಹಲಗೆ ಹಿಡಿದವರು ಮೊದಲು ಮುಳ್ಳಿನ ಮೇಲೆ ಆವೇಶ ಭರಿತರಾಗಿ ಸಾಗಿ ಬಂದರು.
ಹರಕೆ ಹೊತ್ತವರು ಒಬ್ಬೊಬ್ಬರಾಗಿ ಸಾಲಾಗಿ ‘ರಾಮ ರಾಮ ಗೋವಿಂದ’ ಎನ್ನುತ್ತಾ ಮುಳ್ಳಿನ ಮೇಲೆ ಕೂಗುತ್ತಾ ನಡೆದು ಬಂದರು. ಭಕ್ತರು ದೇವಾಲಯದಲ್ಲಿ ಹರಿಸೇವೆ, ಮುಡಿ ಅರ್ಪಣೆ ಹಾಗೂ ಬಾಯಿಬೀಗದ ಹರಕೆ ಸಮರ್ಪಿಸಿದರು.
ದೇವಾಲಯ ಹಾಗೂ ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾಜಬೀದಿಯಲ್ಲಿ ಡೊಳ್ಳು, ಸಮಾಳ, ತಮಟೆ ಮೇಳ, ನಾಸಿಕ್ ಡೋಲು, ಜಾಂಚ್ ವಾದ್ಯದೊಂದಿಗೆ ಕುದುರೆ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಓಕುಳಿಯಾಟದ ನಂತರ ಕಂಕಣ ವಿಸರ್ಜನೆಯೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು. ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.