ಹರಪನಹಳ್ಳಿ: ಕೆರೆಯನ್ನು ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮತ್ತು ಕೆರೆ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಕರೆ ಕಾನಹಳ್ಳಿ ಗ್ರಾಮದಿಂದ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಿದರು.
ನೇತೃತ್ವ ವಹಿಸಿರುವದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿ, ‘ಕೆರೆ ಕಾನಹಳ್ಳಿ ಗ್ರಾಮದಲ್ಲಿರುವ ಕೆರೆ ಪ್ರದೇಶವನ್ನು ಕೆಲವರು ಅತಿಕ್ರಮಣ ಮಾಡಿ ಬಿತ್ತನೆ ಮಾಡಿದ್ದಾರೆ. ಸ್ಮಶಾನದ ಜಾಗವನ್ನು ಖಾಸಗಿ ವ್ಯಕ್ತಿಗೆ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಒತ್ತುವರಿ ಮಾಡಿದ ಪ್ರದೇಶವನ್ನು ತೆರವುಗೊಳಿಸಿ ಕೆರೆಪ್ರದೇಶವನ್ನು ಸಂರಕ್ಷಿಸಬೇಕು’ ಎಂದು ಒತ್ತಾಯಿಸಿದರು.
ಮಳೆಯನ್ನೇ ಆಶ್ರಯಿಸಿರುವ ತಾಲ್ಲೂಕಿನಲ್ಲಿ ಜೀವನ ನಡೆಸುವುದೇ ಕಷ್ಟ. ಸಾವಿರಾರು ಕುಟುಂಬಗಳು ಕೆರೆಯನ್ನೇ ಆಶ್ರಯಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಕೆರೆಯಂಗಳವನ್ನು ಅತಿಕ್ರಮಿಸಿರುವ ಭೂಗಳ್ಳರಿಂದ ಭೂಮಿ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಪಾದಯಾತ್ರೆಯು ಹುಲಿಕಟ್ಟೆ ಕ್ರಾಸ್, ಉದ್ಗಟ್ಟಿ ಕ್ರಾಸ್ ಮೂಲಕ ತೊಗರಿಕಟ್ಟೆಯನ್ನು ತಲುಪಿತು. ಸೋಮವಾರ ಬೆಳಿಗ್ಗೆ ನಾರಾಯಣಪುರ, ಯಲ್ಲಾಪುರದ ಮಾರ್ಗವಾಗಿ ಹರಪನಹಳ್ಳಿ ತಲುಪಿ ಮಿನಿ ವಿಧಾನಸೌಧ ತಲುಪಲಿದೆ.