ಭರಮಸಾಗರ: ಕೆರೆ ಪೈಪ್ಲೈನ್ ಕಾಮಗಾರಿ ಮುಗಿದ ಮೇಲೆ ಭರಮಸಾಗರ ಕೆರೆ ತುಂಬಲು ಕೇವಲ 23 ದಿನ ಸಾಕು ಎಂದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇಲ್ಲಿನ ದೊಡ್ಡಕೆರೆ ಏರಿಯಲ್ಲಿ ಶುಕ್ರವಾರ ಕೆರೆನೀರು ಹರಿಸುವ ಯೋಜನೆಯ ಸ್ಥಳ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡರೆ ಕೆರೆ ಬೇಗ ತುಂಬುತ್ತದೆ ಎಂದು ಗುತ್ತಿಗೆ ದಾರರು ತಿಳಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಭರಮಸಾಗರ ಕೆರೆಗೆ ನೀರು ಬರುವ ನಿರೀಕ್ಷೆಯಿದೆ. ದೊಡ್ಡಕೆರೆ ಜಾಕ್ವೆಲ್ ಸ್ಥಳವನ್ನು ಅಧಿಕಾರಿಗಳು ನಕ್ಷೆಯೊಂದಿಗೆ ಸ್ವಾಮೀಜಿಗೆ ವಿವರಿಸಿದರು.
ಮಲಶೆಟ್ಟಿ ಹಳ್ಳಿ ಕೆರೆ, ಜಾಕ್ವೆಲ್ ಪರಿಶೀಲನೆ:
ಭರಮಸಾಗರದಿಂದ ಮಲಶೆಟ್ಟಿಹಳ್ಳಿಗೆ ತೆರಳಿ ನೂತನವಾಗಿ ನಿರ್ಮಿಸಿರುವ ಕೆರೆಯನ್ನು ಪರಿಶೀಲಿಸಿದರು. ಸಮೀಪದ ಒಂದು ಎಕರೆ ಜಾಗದಲ್ಲಿ ಗೋಕಟ್ಟೆ ನಿರ್ಮಿಸಬೇಕು. ಜಾಕ್ವೆಲ್ಗೆ ಬರುವ ನೀರು ಹಾಗೂ ಹೊರ ಹೋಗುವ ನೀರು ಗೊತ್ತಾಗುವ ರೀತಿ ಪೈಪ್ ಅಳವಡಿಸಬೇಕು ಎಂದು ಆಭಾಗದ ರೈತರು ಮನವಿ ಮಾಡಿದರು. ಈ ಬಗ್ಗೆ ಮಲ್ಲಶೆಟ್ಟಿ ಹಳ್ಳಿಯ ಕೆರೆ, ಜಾಕ್ವೆಲ್ ಇತರೆ ಕೆಲಸಗಳಿಗೆ ₹ 5 ಕೋಟಿ ನೀಡಲಾಗುವುದು. ಅದರಲ್ಲಿ ಗೋಕಟ್ಟೆಗೂ ಹಣ ನೀಡುವುದಾಗಿ ನೀರಾವರಿ ನಿಗಮದ ನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ತಿಳಿಸಿದರು.
ಹರಿಹರದ ಹಲಸಬಾಳು ಗ್ರಾಮದ ತುಂಗಭದ್ರಾ ನದಿಯ ಬಳಿಯ ಜಾಕ್ವೆಲ್ ಬಳಿ ನಡೆಯುತ್ತಿರುವ ಕಾಮಗಾರಿ,ಜಗಳೂರು ಕೆರೆಗೆ ನೀರು ಹರಿಸುವ ಜಾಕ್ವೆಲ್ ಪರಿಶೀಲನೆ ನಡೆಸಿದರು. ಪೈಪ್ಲೈನ್ ಉಚ್ಚಂಗಿದುರ್ಗದವರೆಗೂ ಇರಬೇಕು. ನಡುವೆ ಯಾವುದೇ ವಾಲ್, ಬೈಪಾಸ್ ಮಾಡಬಾರದು ಎಂದು ಸ್ವಾಮೀಜಿ ಅಧಿಕಾರಿಗಳಿಗೆ ಸೂಚಿಸಿದರು.