ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮ ಪಂಚಾಯಿತಿಗೆ ಪಿಡಿಒ ನೇಮಕ ಮಾಡಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಡ್ಡಗಾಲು ಇಡುತ್ತಿದ್ದಾರೆ. ಕೂಡಲೇ ಪಿಡಿಒ ನೇಮಕ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಮಾತನಾಡಿ, ‘ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಡಳಿತ ನಡೆಸುತ್ತಿದ್ದಾರೆ. ಅದಕ್ಕಾಗಿ ದುರುದ್ದೇಶದಿಂದ ಪಿಡಿಒ ನೇಮಕಾತಿ ಆಗದಂತೆ ಶಾಸಕರು ಅಡ್ದಿಪಡಿಸುತ್ತಿದ್ದಾರೆ. ಪಿಡಿಒ ನೇಮಕಾತಿ ಮಾಡಬೇಕು ಎಂದು ಬೇಡಿಕೆ ಸಲ್ಲಿಸಲು ಈಚೆಗೆ ಇತ್ತೀಚೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಶಾಸಕರ ನಿವಾಸಕ್ಕೆ ತೆರಳಿದ್ದರು. ಆಗ ಬಿಜೆಪಿ ಶಾಲು ಹಾಕಿ ಸನ್ಮಾನ ಮಾಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಅಪ ಪ್ರಚಾರ ಮಾಡಿದ್ದರು’ ಎಂದು ಆರೋಪಿಸಿದರು.
ಪಿಡಿಒ ಇಲ್ಲದ ಕಾರಣ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಜನರು ಕಚೇರಿಗೆ ಅಲೆದಾಡುವಂತಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ, ‘ಅಧಿಕಾರಕ್ಕೆ ಬಂದು 6 ತಿಂಗಳಾದರು ಪಿಡಿಒ ನೇಮಕ ಮಾಡಿಲ್ಲ. ಚುನಾಯಿತ ಪ್ರತಿನಿಧಿಗಳಾದ ನಮಗೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಕಚೇರಿಗೆ ಬಂದ ಜನರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.
ಉಪಾಧ್ಯಕ್ಷೆ ಲಕ್ಕಮ್ಮ, ಸದಸ್ಯ ರಾಜಪ್ಪ, ನಾಗಣ್ಣ, ಎಂಜಿಕೆ ಚಂದ್ರ ಹಾಗೂ ಗ್ರಾಮಸ್ಥರಾದ ಎ.ಆರ್. ಜಗದೀಶ್, ಸಿ.ಆರ್. ನೀಲಪ್ಪ, ಜಯಮ್ಮ, ರೂಪಾ, ರಂಗನಾಥ್, ಸಂತೋಷ್ ಮಂಜುನಾಥ್ ಮತ್ತು ಜಿಲ್ಲಾ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್ , ಜಿಕ್ರೀಯಾ, ಹಾಲೇಶ್, ಶಿವರಾಜ್ , ಬಾಷಾ ಅವರೂ ಇದ್ದರು.