ದಾವಣಗೆರೆ: ವಿಜಯನಗರ ಜಿಲ್ಲೆಯ ಹೊಸಪೇಟೆ ನ್ಯಾಯಾಲಯದ ಆವರಣದಲ್ಲೇ ವಕೀಲ ತಾರೇಹಳ್ಳಿ ವೆಂಕಟೇಶ್ ಅವರನ್ನು ಈಚೆಗೆ ಹತ್ಯೆ ಮಾಡಿರುವುದನ್ನು ಖಂಡಿಸಿ ದಾವಣಗೆರೆ ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ವಕೀಲರು ಪ್ರತಿಭಟಿಸಿದರು.
ಮಧ್ಯಾಹ್ನ ನ್ಯಾಯಾಲಯದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟ ವಕೀಲರು ಪಿ.ಬಿ. ರಸ್ತೆಯ ಕೋರ್ಟ್ ಸರ್ಕಲ್ನಲ್ಲಿ ಕೆಲ ಕಾಲ ವಾಹನಗಳನ್ನು ತಡೆದು ಪ್ರತಿಭಟಿಸಿದರು. ತೆಲಂಗಾಣ ರಾಜ್ಯದಲ್ಲಿ ವಕೀಲ ದಂಪತಿಗಳಾದ ಗುಟ್ಟು ವಾಮನ್ರಾವ್ ಹಾಗೂ ಪಿ.ಬಿ.ನಾಗಮಣಿ ದಂಪತಿಯನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿರುವ ಘಟನೆಯನ್ನೂ ಖಂಡಿಸಿದರು. ಬಳಿಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
‘ನಾಗರಿಕರ ಮಾನ, ಆಸ್ತಿ, ಜೀವ ರಕ್ಷಣೆ ಮಾಡುವ ಕೆಲಸದಲ್ಲಿ ನಾವು ತೊಡಗಿಕೊಂಡಿದ್ದೇವೆ. ನಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ನಮಗೆ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ವಕೀಲರ ರಕ್ಷಣೆಗಾಗಿ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜು, ಕಾರ್ಯದರ್ಶಿ ಲೋಕಿಕೆರೆ ಎಚ್.ಪ್ರದೀಪ್, ಸಂಘದ ಪದಾಧಿಕಾರಿಗಳುಹಾಗೂ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.