ದಾವಣಗೆರೆ: ಜಕಾತಿ ಸಂಬಂಧ ಟೆಂಡರ್ ಕೊಡಲು ಲಂಚ ಪಡೆಯುವಾಗ ಇಲ್ಲಿನ ಮಹಾನಗರ ಪಾಲಿಕೆ ವ್ಯವಸ್ಥಾಪಕ (ಮ್ಯಾನೇಜರ್) ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೃಷ್ಟಪ್ಪ ಎಂಬವರಿಗೆ ಜಕಾತಿ ಟೆಂಡರ್ ನೀಡಲು ಒಟ್ಟು ₹ 7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ₹ 2 ಲಕ್ಷವನ್ನು ಮುಂಗಡವಾಗಿ ಪಡೆದಿದ್ದರು. ಉಳಿದ ₹ 5 ಲಕ್ಷವನ್ನು ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.
‘ಅಷ್ಟು ಹಣವನ್ನು ಕೊಡಲು ಆಗುವುದಿಲ್ಲ. ₹ 3 ಲಕ್ಷ ಕೊಡುತ್ತೇನೆ’ ಎಂದು ಕೃಷ್ಣಪ್ಪ ಹೇಳಿದ್ದರು. ಪಾಲಿಕೆ ಕಚೇರಿಯಲ್ಲಿ ಈ ಹಣವನ್ನು ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಆಂಜನೇಯ ಹಾಗೂ ಇತರರು ದಾಳಿ ನಡೆಸಿದ್ದರು. ಪಡೆದ ಲಂಚದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೂ ಪಾಲು ಇದೆ ಎನ್ನಲಾಗಿದ್ದು, ತನಿಖೆಯಿಂದ ಗೊತ್ತಾಗಲಿದೆ.