ದಾವಣಗೆರೆ: ಸರ್ಕಾರ ನೀಡಿರುವ ಆಶ್ರಯ ಮನೆಗಳನ್ನು ಹಿಂದೆ ಭೂಮಿ ನೀಡಿದ್ದ ಖಾಸಗಿ ವ್ಯಕ್ತಿ ತೆರವುಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ. ಆಶ್ರಯ ಮನೆಗಳನ್ನು ಉಳಿಸಿಕೊಡಿ ಎಂದು ಹರಿಹರ ತಾಲ್ಲೂಕಿನ ಮಳಲಹಳ್ಳಿ ಗ್ರಾಮಸ್ಥರು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರಿಗೆ ಮನವಿ ಸಲ್ಲಿಸಿದರು.
ಎಳೇಹೊಳೆ ಗ್ರಾಮ ಪಂಚಾಯಾತಿ ವ್ಯಾಪ್ತಿಗೆ ಸೇರಿರುವ ಮಳಲಹಳ್ಳಿ ಗ್ರಾಮದಲ್ಲಿ 1974-75 ನೇ ಸಾಲಿನಲ್ಲಿ 1 ಎಕರೆ 5 ಗುಂಟೆ ಜಮೀನನ್ನು ಆಶ್ರಯ ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಬಡ ನಿವೇಶನ ರಹಿತರಿಗೆ 33 ಮನೆಗಳನ್ನು 33 ಫಲಾನುಭವಿಗಳಿಗೆ ಹಂಚಿಕೆ ಮಾಡಿ ಹಕ್ಕು ಪ್ರತಗಳನ್ನು ನೀಡಲಾಗಿತ್ತು. ಆಶ್ರಯ ಯೋಜನೆ ಅಡಿಯಲ್ಲಿ ಕಟ್ಟಿಸಿಕೊಡಲಾಗಿತ್ತು. ಆದರೆ ಈಗ ಎಳೇಹೊಳೆ ಗ್ರಾಮದ ಎಂ. ಓಂಕಾಪ್ಪ ಮತ್ತು ಸಹೋದರರು ನ್ಯಾಯಾಲಯಕ್ಕೆ ದೂರುಕೊಟ್ಟು ಈಗ ನಮ್ಮ ಮನೆಗಳನ್ನು ತೆರವುಗೊಳಿಸಲಿಕ್ಕೆ ಆದೇಶವನ್ನು ತಂದಿದ್ದಾರೆ . ಪದೇ ಪದೇ ಮನೆಗಳನ್ನು ಖಾಲಿ ಮಾಡಿ ಎಂದು ಕಿರುಕುಳ ಕೊಡುತ್ತಿದ್ದಾರೆ ಎಂದು ದೂರಿದರು.
ನ್ಯಾಯ ಸಿಗದೇ ಹೋದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.