ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ| ವ್ಯಕ್ತಿ ಕೊಲೆ: ಪತ್ನಿ, ಪ್ರಿಯಕರನ ಬಂಧನ

Last Updated 29 ಮಾರ್ಚ್ 2023, 6:20 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ರಿಂಗ್ ರಸ್ತೆಯಲ್ಲಿರುವ ಆಫೀಸರ್ಸ್‌ ಕ್ಲಬ್‌ ಬಳಿ ಯುಗಾದಿ ಹಬ್ಬದಂದು ಸಂಭವಿಸಿದ್ದ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪತ್ನಿಯೇ ಪ್ರಿಯಕರನಿಗೆ ಪ್ರಚೋದನೆ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ಈ ಸಂಬಂಧ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೈಚುವಳ್ಳಿ ಗ್ರಾಮದ ಮಹಾಂತೇಶ್ ಪುಟ್ಟಪ್ಪ ಚೌರದ (36) ಕೊಲೆಯಾದವರು.

ಮಹಾಂತೇಶ್‌ನ ಪತ್ನಿ ಬುದ್ಧ ಬಸವನಗರ ಹಗೆದಿಬ್ಬ ಸರ್ಕಲ್ ಸಮೀಪ ನೆಲೆಸಿರುವ ಶ್ವೇತಾ (28) ಹಾಗೂ ಅವಳ ಪ್ರಿಯಕರ ಚಂದ್ರಶೇಖರ್ (29) ಬಂಧಿತರು. ಬಂಧಿತನಿಂದ ₹ 1 ಲಕ್ಷ ಬೆಲೆ ಬಾಳುವ 2 ದ್ವಿಚಕ್ರ ವಾಹನ, 2 ಮೊಬೈಲ್, ಒಂದು ಚಾಕು, ಬಿಯರ್ ಬಾಟಲಿ ಹಾಗೂ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್.ಎಸ್. ಲೇಔಟ್ ‘ಎ’ ಬ್ಲಾಕ್ ಬಳಿಯ ರಿಂಗ್ ರಸ್ತೆಯ ಅಂಗಡಿಯೊಂದರ ಪಕ್ಕದ ಖಾಲಿ ನಿವೇಶನದಲ್ಲಿ ಮಾರ್ಚ್‌ 23ರಂದು ವ್ಯಕ್ತಿಯ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿರುವುದು ಪತ್ತೆಯಾಗಿತ್ತು. ಪೊಲೀಸರಿಗೆ ಈ ಬಗ್ಗೆ ಕರೆ ಬಂದಿತ್ತು. ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ನೋಡಿದಾಗ ವ್ಯಕ್ತಿ ಜೀವಂತವಾಗಿದ್ದರಿಂದ ಆಂಬುಲೆನ್ಸ್‌ನಲ್ಲಿ ಸಿ.ಜಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಡಿ.ಸಿ.ಆರ್.ಬಿ ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ್ ಎಸ್. ಅವರ ಇವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ಇನ್ಸ್‌ಪೆಕ್ಟರ್‌ ಪ್ರಭಾವತಿ ಸಿ. ಶೇತಸನದಿ, ಡಿ.ಸಿ.ಆರ್.ಬಿ ವಿಭಾಗ ಹಾಗೂ ವಿದ್ಯಾನಗರ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಮೃತ ವ್ಯಕ್ತಿಯ ಬೆರಳು ಮುದ್ರೆಯ ಸಹಾಯದಿಂದ ಮೃತನ ಹೆಸರು ವಿಳಾಸ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ
ಹಚ್ಚಿದ್ದಾರೆ.

ಚಂದ್ರಶೇಖರ್‌ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಶ್ವೇತಾ ಗಂಡನ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದಳು. ಪ್ರತಿ ದಿವಸ ಪತಿ–ಪತ್ನಿಯರ ನಡುವೆ ಜಗಳ ನಡೆಯುತ್ತಿತ್ತು. ಇದೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನು ತ್ವರಿತವಾಗಿ ಪತ್ತೆಮಾಡಿರುವ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT