ದಾವಣಗೆರೆ: ‘ಬೆಂಗಳೂರಿನಲ್ಲಿ ಕೆರೆಗಳು ಒತ್ತುವರಿ ಆಗಿರುವುದರಿಂದ ಮಳೆ ಹೆಚ್ಚು ಬಂದಾಗ ನೆರೆ ಉಂಟಾಗುತ್ತದೆ. ಇದಕ್ಕೆ ಬೆಂಗಳೂರಿನ ಸುತ್ತಮುತ್ತ ಇರುವ ಎಲ್ಲ ಪಕ್ಷಗಳ ನಾಯಕರು ಹೊಣೆ’ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಆರೋಪಿಸಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಕೆಲವು ಸರ್ಕಾರಗಳು ಚರಂಡಿ, ಕಾಲುವೆಗಳನ್ನು ಸರಿ ಮಾಡದೇ ಇರುವುದು ಕೂಡ ನೆರೆಗೆ ಕಾರಣ. ನಮ್ಮ ಸರ್ಕಾರ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸುವ, ರಾಜಕಾಲುವೆ, ಚರಂಡಿಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದೆ’ ಎಂದರು.
‘ಬೆಂಗಳೂರು ಪ್ರವಾಹಕ್ಕೆ ಆ ಪಕ್ಷ, ಈ ಪಕ್ಷ ಕಾರಣ ಎಂದು ದೂಷಿಸುವುದು ಸರಿಯಲ್ಲ. ಈ ರೀತಿಯ ಅಕಾಲಿಕ ಮಳೆ ಬಂದಾಗ ಯಾವ ಸರ್ಕಾರವಾದರೂ ಏನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ಡಿ.ಕೆ. ಶಿವಕುಮಾರ್ ಅವರಿಗೆ ಕಾಮಾಲೆ ಕಣ್ಣು. ಆ ಕಣ್ಣಿಗೆ ನಾವು ಚೆನ್ನಾಗಿ ಕೆಲಸ ಮಾಡುತ್ತಿರುವುದು ಕಾಣುತ್ತಿಲ್ಲ. ಅದಕ್ಕೇ ನಮ್ಮನ್ನು ಟೀಕಿಸುತ್ತಿದ್ದಾರೆ’ ಎಂದು ಅವರು ವ್ಯಂಗ್ಯವಾಡಿದರು.