ಸಬೂಬು ಹೇಳದೇ ಕೆಲಸ ಪೂರ್ಣಗೊಳಿಸಿ

ದಾವಣಗೆರೆ: ‘ತಿಂಗಳ ಹಿಂದೆಯೇ ಗಾಜಿನ ಮನೆಗೆ ಭೇಟಿ ನೀಡಿದಾಗ, ಆಗಸ್ಟ್ 15ರೊಳಗೆ ಎಲ್ಲಾ ಕೆಲಸ ಪೂರ್ಣಗೊಳಿಸಿ ಎಂದು ಸೂಚಿಸಿದ್ದೆ. ಆದರೆ, ಕಾಮಗಾರಿ ತ್ವರಿತವಾಗಿ ನಡೆಯುತ್ತಿಲ್ಲ’ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಕುಂದವಾಡ ಕೆರೆ ಮಗ್ಗುಲಿನ ಗಾಜಿನ ಮನೆಯ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದ ಅವರು, ‘ಸಿವಿಲ್ ಕಾಮಗಾರಿ ಇನ್ನೂ ಬಹಳಷ್ಟು ಬಾಕಿಯಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಹಗಲೂ ರಾತ್ರಿ ಸಾವಿರ ಮಂದಿ ಕೆಲಸ ಮಾಡಿದರೂ ನಾನು ನೀಡಿದ ಗಡುವಿನ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ನಿರ್ಮಿತಿ ಕೇಂದ್ರದವರು ತೋಟಗಾರಿಕೆ ಇಲಾಖೆ ಮೇಲೆ, ತೋಟಗಾರಿಕೆ ಅಧಿಕಾರಿಗಳು ನಿರ್ಮಿತಿ ಕೇಂದ್ರದ ಸಿಬ್ಬಂದಿ ಮೇಲೆ ದೂರುತ್ತಿದ್ದಾರೆ. ಅವರಿವರ ಮೇಲೆ ಸಬೂಬು ಹೇಳದೇ ಕೆಲಸ ಪೂರ್ಣಗೊಳಿಸಿ’ ಎಂದು ಸೂಚನೆ ನೀಡಿದರು.
ಕೆಲಸ ಪೂರ್ಣಗೊಳಿಸಿದರೆ ಸ್ವಾತಂತ್ರ್ಯ ದಿನಾಚರಣೆಯಂದು ಗಾಜಿನ ಮನೆಯಲ್ಲೊಂದು ಕಾರ್ಯಕ್ರಮ ನಡೆಸುವ ಉದ್ದೇಶವಿದೆ. ಹೀಗಾಗಿ ಕಾಮಗಾರಿಯನ್ನು ಚುರುಕುಗೊಳಿಸಿ ಎಂದು ತಿಳಿಸಿದರು.
ಯೋಜನೆಯ ನೀಲನಕ್ಷೆಯಂತೆ ಗಾಜಿನ ಮನೆಯ ಸುತ್ತಲೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕಿದೆ. ಹಾಗೆಯೇ ಗಾಜಿನ ಮನೆಯ ಒಳಾಂಗಣದಲ್ಲೂ ಸಸ್ಯಗಳನ್ನು ಬೆಳೆಸಬೇಕಿದೆ. ಈ ಕೆಲಸಗಳನ್ನೆಲ್ಲಾ ಶೀಘ್ರ ಪೂರ್ಣಗೊಳಿಸಿ ಎಂದು ಹೇಳಿದರು.
ಸಿವಿಲ್ ಕಾಮಗಾರಿ ಬಾಕಿ: ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಮಾತನಾಡಿ, ‘ಸಿವಿಲ್ ಕಾಮಗಾರಿ ಮುಗಿಯುವುದನ್ನೇ ಕಾಯುತ್ತಿದ್ದೇವೆ. ಅದನ್ನು ಪೂರ್ಣಗೊಳಿಸಿದ ತಕ್ಷಣ ಹುಲ್ಲುಹಾಸು ಅಳವಡಿಕೆ ಹಾಗೂ ಅಲಂಕಾರಿಕ ಗಿಡಗಳನ್ನು ನೆಡುವ ಕೆಲಸ ಪೂರ್ಣಗೊಳಿಸಲಾಗುವುದು. ಗಾಜಿನ ಮನೆಯ ಆವರಣದಲ್ಲೂ ಸಸ್ಯಗಳನ್ನು ಇಟ್ಟು, ಅಲಂಕರಿಸುವ ಕೆಲಸವನ್ನೂ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.
ನಿರ್ಮಿತಿ ಕೇಂದ್ರದ ಸಹಾಯಕ ನಿರ್ದೇಶಕ ಚಂದ್ರಶೇಖರ್, ‘ಗಾಜಿನ ಮನೆ ಯೋಜನೆಗೆ ₹ 23 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಯೋಜನಾ ವೆಚ್ಚ ಹೆಚ್ಚುತ್ತಿದೆ. ಹೀಗಾಗಿ, ಇನ್ನಷ್ಟು ಅನುದಾನ ಬೇಕಾಗಬಹುದು’ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರವೀಂದ್ರನಾಥ್, ‘ಸ್ಮಾರ್ಟ್ಸಿಟಿ ಯೋಜನೆಯಡಿ ಅನುದಾನ ಲಭ್ಯವಿದೆ. ಇದನ್ನು ಗಾಜಿನ ಮನೆ ನಿರ್ಮಾಣಕ್ಕೆ ಬಳಸಲೂ ಅವಕಾಶವಿದೆ. ಹೀಗಾಗಿ, ನಗರಪಾಲಿಕೆ ಆಯುಕ್ತ, ಜಿಲ್ಲಾಧಿಕಾರಿ ಹಾಗೂ ಸ್ಮಾರ್ಟ್ಸಿಟಿ ಅಧಿಕಾರಿಗಳ ಜತೆಗೆ ಚರ್ಚಿಸಿ, ₹ 1.5 ಕೋಟಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಗಾಜಿನ ಮನೆ ಆವರಣದಲ್ಲಿ ಓಪನ್ ಜಿಮ್ ನಿರ್ಮಾಣಕ್ಕೆ ಟೆಂಡರ್ ಪಡೆದಿರುವ ಗುತ್ತಿಗೆದಾರರು ಇದುವರೆಗೂ ಕೆಲಸ ಆರಂಭಿಸಿಲ್ಲ. ಪ್ಲಾಟ್ಫಾರಂ ನಿರ್ಮಾಣ, ಉಪಕರಣಗಳ ಅಳವಡಿಕೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಕೂಡಲೇ ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸುವಂತೆ ಸೂಚಿಸಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಿರ್ಮಿತಿ ಕೇಂದ್ರದ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಾಜಿನ ಮನೆ ಕಾಮಗಾರಿಯ ಮಾಹಿತಿ ನೀಡಿದರು. ಮುಖಂಡರಾದ ಶಿವರಾಜ್ ಪಾಟೀಲ್, ಮುಕುಂದಪ್ಪ, ಎ.ಆರ್. ಉಜ್ಜಿನಪ್ಪ, ಎಲ್.ಎನ್. ಕಲ್ಲೇಶ್, ಬಿ.ಜಿ. ಸಿದ್ದೇಶ್ ಅವರೂ ಇದ್ದರು.
ದಾವಣಗೆರೆಯಲ್ಲಿ ನೋಡಲು ಏನೂ ಇಲ್ಲ ಎನ್ನುತ್ತಿದ್ದರು. ಹೀಗಾಗಿ, ಹಿಂದಿನ ಸರ್ಕಾರ ಗಾಜಿನ ಮನೆ ಯೋಜೆನೆ ಕೈಗೆತ್ತಿಕೊಂಡಿದೆ. ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ
–ಎಸ್.ಎ. ರವೀಂದ್ರನಾಥ್, ಶಾಸಕ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.