ಮಲೇಬೆನ್ನೂರು:ಪಟ್ಟಣದ ಉನ್ನತೀಕರಿಸಿದ ಪುರಸಭೆ ಚುನಾವಣೆ ಬಹಿರಂಗ ಪ್ರಚಾರ ಶನಿವಾರ ಅಂತ್ಯವಾಗಿದೆ.
ಎರಡು ದಿನಗಳಿಂದ ಪಟ್ಟಣದ ವಿವಿಧ ಬಡಾವಣೆಗಲ್ಲಿ ಜನರು ಗುಂಪುಗೂಡಿ ಉಮೇದುವಾರರೊಂದಿಗೆ ಜಯಘೋಷಗಳೊಂದಿಗೆ ನಡೆಸುತ್ತಿದ್ದ ಪ್ರಚಾರ ಕಾರ್ಯಕ್ಕೆ ತೆರೆ ಬಿದ್ದಿದೆ.
ವಿವಿಧ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದು, ಮತದಾರರ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಪಟ್ಟಣದಿಂದ ಪರಸ್ಥಳಕ್ಕೆ ಕೆಲಸ ಕಾರ್ಯ ನಿಮಿತ್ತ ಹೋಗಿರುವವರನ್ನು ಕರೆತರುವ ವ್ಯವಸ್ಥೆ ಭರದಿಂದ ಸಾಗಿದೆ.
ಮತಗಟ್ಟೆ ಸಿದ್ಧತೆ:ಚುನಾವಣಾ ಕಾರ್ಯಕ್ಕೆ ಪಟ್ಟಣದ 21 ಮತಗಟ್ಟೆಗಳಲ್ಲಿ ನಿಯೋಜಿತ ಸಿಬ್ಬಂದಿ ಡಿ. 27ರಂದು ನಡೆಯುವ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.ಮತಗಟ್ಟೆಯಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಪೀಠೋಪಕರಣ, ಸುಣ್ಣದ ಪಟ್ಟಿ ಹಾಕುವುದು, ಕುರ್ಚಿ ವ್ಯವಸ್ಥೆ ಮಾಡಲಾಗಿದೆ.
ಕೊರೊನಾ ನಿಯಮ ಪಾಲನೆಗೆ ಚುನಾವಣಾ ಕಾರ್ಯಕ್ಕೆ ನಿರತ ಸಿಬ್ಬಂದಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿದ್ದು ಕಂಡುಬಂತು.
ಪುರಸಭೆಯ ಮುಖ್ಯಾಧಿಕಾರಿ, ಮಾದರಿ ನೀತಿ ಸಂಹಿತೆ ಅಧಿಕಾರಿ ಗಣೇಶ್ ರಾವ್, ಸೆಕ್ಟ್ರಲ್ ಅಧಿಕಾರಿ ಎಂಜಿನಿಯರ್ ಉಮೇಶ್, ಉಪತಹಶೀಲ್ದಾರ್ ಆರ್. ರವಿ, ವಿ.ಎ. ಕೊಟ್ರೇಶ್, ಹಿರಿಯ ಆರೋಗ್ಯ ನಿರೀಕ್ಷಕ ನವೀನ್ ಕಟ್ಟೀಮನಿ, ಪುರಸಭೆಯ ಸಿಬ್ಬಂದಿ, ಗ್ರಾಮ ಸಹಾಯಕ ಅಂಜನಪ್ಪ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದರು.