ದಾವಣಗೆರೆ: ತಮ್ಮ ಸಹೋದರಿ ಜತೆ ಅನೈತಿಕ ಸಂಬಂಧ ಹೊಂದಿರುವ ಅನುಮಾನದಿಂದ ಯುವಕನನ್ನು ಕೊಲೆ ಮಾಡಿದ ಆರೋಪದಲ್ಲಿ ಆಕೆಯ ಮೂವರು ಸಹೋದರರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಾತಿ ಗ್ರಾಮದ ಹರೀಶ (29) ಎಂಬವರನ್ನು ಮಂಗಳವಾರ ಹರಿಹರ ನಗರದ ಭಾರತ್ ಆಯಿಲ್ ಮಿಲ್ ಕಂಪೌಂಡ್ ಹತ್ತಿರ ಕೊಲೆ ಮಾಡಲಾಗಿತ್ತು. ಈ ಸಂಬಂಧ ಹರೀಶ ಅವರ ಪತ್ನಿ ರೇಣುಕಮ್ಮ ನೀಡಿದ ದೂರಿನಂತೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಹರಿಹರ ಸಿಪಿಐ ಗುರುನಾಥ ನೇತೃತ್ವದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ ತಂಡ ರಚಿಸಿದ್ದರು. ಈ ತಂಡವು ಭಾರತ್ ಆಯಿಲ್ ಮಿಲ್ ಕಂಪೌಂಡ್ ನಿವಾಸಿಗಳಾದ ನಾಗರಾಜ (32), ಮಾರುತಿ (27), ರಾಘವೇಂದ್ರ(25) ಎಂಬ ಸಹೋದರರು ಹಾಗೂ ರಮೇಶ (39) ಎಂಬ ಆರೋಪಿಗಳನ್ನು ಬಂಧಿಸಿದೆ.
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಸ್ಐ ಡಿ. ರವಿಕುಮಾರ್ ಸಿಬ್ಬಂದಿ ಲಿಂಗರಾಜ್, ಪ್ರಕಾಶ್, ಮಂಜುನಾಥ, ದ್ವಾರಕೀಶ್, ದಿಲೀಪ್ ಸಿರಿಗೆರೆ, ದೇವರಾಜ, ಶಿವರಾಜ, ಶಿವಪದ್ಮ, ಮುರುಳಿಧರ್ ಭಾಗವಹಿಸಿದ್ದರು.
ಕೊಲೆ ನಡೆದು ನಡೆದು 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಸಾಧನೆಗೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.