ಪ್ರಜಾವಾಣಿ ವಾರ್ತೆ
ಜಗಳೂರು: ರಸ್ತೆ ಕಾಮಗಾರಿಯ ಬಿಲ್ ಮಾಡಲು ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿ ಮೂವರನ್ನು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್, ಪ್ರಥಮ ದರ್ಜೆ ಸಹಾಯಕ ಮಂಜುರಾಜ್ ಹಾಗೂ ಲಂಚ ಹಣ ಪಡೆಯಲು ಸಹಕರಿಸಿದ ಆರೋಪದ ಮೇರೆಗೆ ಗುತ್ತಿಗೆದಾರ ಅರವಿಂದ್ ಎಂಬುವವರನ್ನು
ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.
ತಾಲ್ಲೂಕಿನ ಗೌರಿಪುರ ಗ್ರಾಮದ ಗುತ್ತಿಗೆದಾರ ವೈ.ಪಿ. ಸಿದ್ದನಗೌಡ ಅವರ ದೂರಿನ ಮೇರೆಗೆ ಎಸಿಬಿ ಪೊಲೀಸರು ಪಟ್ಟಣದ ಪಂಚಾಯತ್ ರಾಜ್ ಇಲಾಖೆಯ ಕಚೇರಿಯ ಮೇಲೆ ದಾಳಿ ನಡೆಸಿದರು.
ತಾಲ್ಲೂಕಿನ ಕೆಚ್ಚೇನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ₹ 3,44,702 ಮೊತ್ತದ ಬಿಲ್ ಮಾಡಲು ₹ 1,08,000 ಕೊಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಿದ್ದನಗೌಡ ಅವರಿಂದ ಹಣವನ್ನು ಸ್ವೀಕರಿಸುವಾಗ ಅಧಿಕಾರಿಗಳು ದಾಳಿ ನಡೆಸಿದರು.
ಎಸಿಬಿ ಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿಡಿವೈಎಸ್ ಪಿ.ಎಂ. ಪ್ರವೀಣ್, ಇನ್ಸ್ಪೆಕ್ಟರ್ ರವೀಂದ್ರ ಎಂ. ಕುರುಬಗಟ್ಟಿ ಹಾಗೂ ಸಿಬ್ಬಂದಿ ಆಂಜನೇಯ, ಉಮೇಶ್, ವೀರೇಶಪ್ಪ, ಕಲ್ಲೇಶಪ್ಪ, ಮೋಹನ್ಕುಮಾರ್, ಧನರಾಜ್, ವಿನಾಯಕ, ನೂರುಲ್ಲಾ ಅವರೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.