ಜಗಳೂರು: ಏಕಬೆಳೆ ಪದ್ಧತಿಯನ್ನು ಕೈಬಿಟ್ಟು ಮಿಶ್ರಬೆಳೆ ಪದ್ಧತಿ ಅಳವಡಿಸಿಕೊಂಡರೆ ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಸಲಹೆ ನೀಡಿದರು.
ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಸ್ಯ ಸಂರಕ್ಷಣಾ ಯೋಜನೆಯಡಿ ಸುರಕ್ಷಿತ ಕೀಟನಾಶಕ ಬಳಕೆ ಮತ್ತು ಬೀಜೋಪಚಾರ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಶಕಗಳ ಹಿಂದೆ ಎಲ್ಲೆಡೆ ಜಮೀನುಗಳಲ್ಲಿ ಸ್ವಾಭಾವಿಕವಾಗಿ ಎರೆಹುಳುಗಳು ಕಂಡುಬರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಕೀಟನಾಶಕಗಳ ವಿಪರೀತ ಬಳಕೆಯಿಂದ ಎರೆಹುಳುಗಳು ಅವನತಿಯತ್ತ ಸಾಗಿದ್ದು, ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ನರೇಗಾ ಯೋಜನೆಯಡಿ ಎರೆಹುಳು ಸಾಕಾಣಿಕೆ ತೊಟ್ಟಿ ನಿರ್ಮಿಸಿ ಬೆಳೆಗಳ ಸಂರ
ಕ್ಷಣೆ ಮಾಡಿಕೊಳ್ಳಬೇಕು, ಸುರಕ್ಷಿತ ಕೀಟನಾಶಕಗಳನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಹೇಳಿದರು.
‘ನಮ್ಮ ಪೂರ್ವಜರು ಸ್ವತಃ ಮನೆಗಳಲ್ಲಿ ತೊಗರಿ ಹಾಗೂ ಇತರೆ ಅಕ್ಕಡಿ ಬೆಳೆಗಳ ಗುಣಮಟ್ಟದ ಬೀಜಗಳನ್ನು ತಾವೇ ತಯಾರಿಸುತ್ತಿದ್ದರು. ಈಚೆಗೆ ಮೆಕ್ಕೆಜೋಳ ಬೆಳೆಗೆ ಮಾರುಹೋಗಿ ಅಕ್ಕಡಿ ಬೆಳೆಗಳು ಮಾಯವಾಗುತ್ತಿವೆ. ರೈತರು ಇಲಾಖೆಗಳ ಸಲಹೆ ಪಡೆದು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಬೇಕು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ’ ಎಂದರು.
ಉಪನಿರ್ದೇಶಕ ಆರ್. ತಿಪ್ಪೇಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು, ತಹಶೀಲ್ದಾರ್ ಡಾ.ನಾಗವೇಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಇಒ ಲಕ್ಷ್ಮೀಪತಿ ಅವರೂ ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.