ದಾವಣಗೆರೆ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಕಾಯಂಗೊಳಿಸಲು ಆಗ್ರಹಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ಎಂ) ಯೋಜನೆಯಡಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರು ಸಿಐಟಿಯು ನೇತೃತ್ವದಲ್ಲಿ ಜಯದೇವ ವೃತ್ತದಲ್ಲಿ ಬುಧವಾರ ಮುಷ್ಕರ ಆರಂಭಿಸಿದರು.
‘ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ₹8800 ವೇತನ ನೀಡುತ್ತಿದ್ದು, ಕಾಯಂ ನೌಕರರಿಗೆ ₹25 ಸಾವಿರ ನೀಡಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹೊರಗುತ್ತಿಗೆಯನ್ನು ರದ್ದು ಮಾಡಿ ಇಲಾಖೆಯ ಅಡಿಯಲ್ಲೇ ನೇಮಕ ಮಾಡಿ ಮುಂದುವರೆಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ಆರೋಗ್ಯ ಇಲಾಖೆಯಲ್ಲಿ ಶೇ 70ರಷ್ಟು ಹೊರಗುತ್ತಿಗೆ ನೌಕರರು ಇದ್ದು, ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ನೌಕರರು ಕೋವಿಡ್ ಒಳಗೊಂಡಂತೆ ಎಲ್ಲಾ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲಸಕ್ಕೆ ತಕ್ಕ ವೇತನ ಇಲ್ಲದೇ ಪರಿತಪಿಸುವಂತಾಗಿದೆ. ಸಾವಿರಾರು ಜನರ ಆರೋಗ್ಯ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡುವವರಿಗೆ ಆರೋಗ್ಯ ವಿಮೆ ಸೌಲಭ್ಯವೇ ಇಲ್ಲ’ ಎಂದು ಆರೋಪಿಸಿದರು.
‘ಸೆಪ್ಟೆಂಬರ್ 24ರಿಂದ ಕೆಲಸ ಸ್ಥಗಿತಗೊಳಿಸಿದ್ದರೂ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಈಗ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ. ಈಗಲೂ ಸರ್ಕಾರ ಸ್ಪಂದಿಸದೇ ಹೋದರೆ ಆಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ’ ಎಚ್ಚರಿಸಿದರು.
ಸಂಘಟನೆಯ ಮುಖಂಡರಾದ ಕೆ.ಎಚ್.ಆನಂದರಾಜ್, ಹುಲುಗಮ್ಮ, ಇ. ಶ್ರೀನಿವಾಸ್, ತ್ರಿವೇಣಿ, ರೂಪಾ, ಉಮಾಬಾಯಿ, ನೇತ್ರಾವತಿ, ಪ್ರಶಾಂತ್, ಬಸವರಾಜಯ್ಯ ಇದ್ದರು.