ದಾವಣಗೆರೆ: ವಿದ್ಯಾನಗರದಲ್ಲಿರುವ ಫೈನ್ಆರ್ಟ್ಸ್ ಕಾಲೇಜು ಆವರಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಸತಿ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ವಿ. ಹಲಸೆ ಸ್ಪಷ್ಟಪಡಿಸಿದ್ದಾರೆ.
‘ಹಿಂದೆ ಅಂಥದ್ದೊಂದು ಪ್ರಸ್ತಾಪ ಇತ್ತು. ಅದರ ವಿರುದ್ಧ ವಿಶ್ವವಿದ್ಯಾಲಯದಿಂದ ನ್ಯಾಯಾಲಯಕ್ಕೆ ಅಪೀಲು ಮಾಡಲಾಗಿತ್ತು. ತೀರ್ಪು ವಿಶ್ವವಿದ್ಯಾಲಯದ ಪರ ಬಂದಿತ್ತು. ಅಲ್ಲಿ ಒಂದು ಮೂಲೆಯಲ್ಲಿ ಒತ್ತುವರಿಯನ್ನು ತಡೆಯುವುದಕ್ಕಾಗಿ ವಿಶ್ವವಿದ್ಯಾಲಯದ ಕುಲಪತಿಗೆ ವಸತಿ ನಿರ್ಮಿಸಲಾಗಿದೆ. ಹಾಗಂತ ಬೇರೆ ವಸತಿಗೆ ಅವಕಾಶವಿಲ್ಲ. ತಹಶೀಲ್ದಾರ್ ಗಿರೀಶ್ ಜತೆಯೂ ಈ ಬಗ್ಗೆ ಮಾತನಾಡಿದ್ದೇನೆ. ಸರ್ವೆಯಷ್ಟೇ ಮಾಡಿರುವುದು. ಅಲ್ಲಿ ವಸತಿ ನಿರ್ಮಾಣ ಮಾಡಲು ಅವಕಾಶವಿಲ್ಲ ಎಂಬುದನ್ನು ತಹಶೀಲ್ದಾರ್ ತಿಳಿಸಿದ್ದಾರೆ’ ಎಂದು ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದರು.